ಮೈಸೂರು : ಯತೀಂದ್ರ ಅವ್ರೇ ಯಾರೋ ಚೇಲಾಗಳ ಕೈಯಲ್ಲಿ ಪ್ರತಾಪ್ ಸಿಂಹ ವರುಣಾದಿಂದ ಸ್ಪರ್ಧೆ ಮಾಡಲಿ ಅಂತ ಹೇಳಿ ಕಳಿಸುತ್ತಿದ್ದೀರಿ? ಸಿದ್ದರಾಮಯ್ಯಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲ್ ಹಾಕಿದ್ದಾರೆ.
ʻಮಾಡಲು ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡುವುದಿಲ್ಲʼ ಎಂಬ ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಕೆಲಸ ಅಂದ್ರೆ ಬರೀ ವರ್ಗಾವಣೆ ಮಾಡಿಸೋದಾ? ವರ್ಗಾವಣೆ ಲಿಸ್ಟ್ ಕೊಟ್ಟು ಅಪ್ಪ ಕೊಟ್ಟಿರೋದು ಅಷ್ಟೇ ಮಾಡಿ ಅನ್ನೋದು ಮಾತ್ರ ಕೆಲಸನಾ? ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡೋದೇ ಕೆಲಸನಾ? ನೀವು ಜಸ್ಟ್ ಎಂಎಲ್ಸಿ. ನೀವು ಯಾವ ಕೆಪಾಸಿಟಿ ಮೇಲೆ ವರ್ಗಾವಣೆ ಮಾಡಿಸುತ್ತೀರಾ? ಯತೀಂದ್ರ ಅವರೇ ನಿಮ್ಮಂತಹ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ. ವರ್ಗಾವಣೆ ದಂಧೆ ಕೆಲಸ ನಿಮಗೇ ಇರಲಿ ಎಂದು ಕುಟುಕಿದ್ದಾರೆ.
ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಅಂತಾ ಇರದೇ ಇದ್ದಿದ್ದರೆ ನಿಮ್ಮನ್ನು ಯಾವ ಎಂಕಣ್ಣ, ಸೀನಣ್ಣನೂ ಕ್ಯಾರೇ ಅನ್ನುತ್ತಿರಲಿಲ್ಲ. ಅಪ್ಪನ ಹೆಸರಿಂದ ಅಸ್ತಿತ್ವ ಉಳಿಸಿಕೊಂಡಿರುವ ನೀವು ನನಗೆ ಪಾಠ ಹೇಳಬೇಡಿ. ನಿಮ್ಮ ಅಪ್ಪ ಅವರು ಆರಾಮಾಗಿ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತಿರುವ ರಸ್ತೆ ಮಾಡಿಸಿದ್ದು ಈ ಪ್ರತಾಪ್ ಸಿಂಹ ಅನ್ನೋದು ನೆನಪಿರಲಿ. ನಿಮ್ಮ ಅಪ್ಪ ಮೈಸೂರಿಗೆ ಒಂದಾದರೂ ಈ ರೀತಿಯ ರೋಡ್ ಮಾಡಿಸಿದ್ದಾರಾ ಹೇಳಿ? ಯಾರೋ ಚೇಲಾಗಳ ಕೈಯಲ್ಲಿ ಪ್ರತಾಪ್ ಸಿಂಹ ವರುಣದಿಂದ ಸ್ಪರ್ಧೆ ಮಾಡಲಿ ಎಂದು ಹೇಳಿಸುತ್ತಿದ್ದೀರಾ. ಸಿದ್ದರಾಮಯ್ಯಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ನಂಗೆ ಟಿಕೆಟ್ ತಪ್ಪಿದೆ ಅಷ್ಟೇ. ನನಗಷ್ಟೇ ಅಲ್ಲ ಇಡೀ ದೇಶದಲ್ಲಿ 132 ಜನಕ್ಕೆ ಟಿಕೆಟ್ ಕೊಟ್ಟಿಲ್ಲ, ಅವರೆಲ್ಲ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ನೆಕ್ಸ್ಟ್ ಅಸೆಂಬ್ಲಿಗೆ ಮೈಸೂರಿನಿಂದಲೇ ಗೆದ್ದು ಬರ್ತೀನಿ. ಅವತ್ತು ನೀವು ಎಲ್ಲಿ ಇರುತ್ತೀರಾ ನೋಡ್ತಿನಿ. ನಿಮ್ಮ ರೀತಿ ಹಿಂಬಾಗಿಲಿನಿಂದ ಅಸೆಂಬ್ಲಿಗೆ ಬರುವ ಜಾಯಮಾನ ನನ್ನದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.



