ಬೆಂಗಳೂರು: ರಾಜ್ಯ ಸರ್ಕಾರವು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟು, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆ (KMIO)ಯಲ್ಲಿ ಭಾರತದಲ್ಲೇ ಮೊದಲ ಪ್ರೋಟಾನ್ ರೇಡಿಯೋಥೆರಪಿ ಘಟಕ ಸ್ಥಾಪನೆಗೆ ಮುಂದಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ದೂರದೃಷ್ಟಿಯಿಂದ ಈ ಯೋಜನೆಗೆ ಚಾಲನೆ ಸಿಕ್ಕಿದೆ.
ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ನಡೆದ ಸಭೆಯಲ್ಲಿ, ಈ ಘಟಕ ಸ್ಥಾಪನೆಗಾಗಿ ₹500 ಕೋಟಿ ಅನುದಾನಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ವರ್ಷ KMIOಯಲ್ಲಿ 21,000ಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರೋಟಾನ್ ಥೆರಪಿ ಅವಶ್ಯಕತೆಯಾಗಿದೆ.
ಸಾಂಪ್ರದಾಯಿಕ ರೇಡಿಯೋಥೆರಪಿಗಿಂತ ಪ್ರೋಟಾನ್ ಥೆರಪಿ ಹೆಚ್ಚು ನಿಖರವಾದದು; ಇದು ಸಮಸ್ಯೆಯ ಸ್ಥಳಕ್ಕಷ್ಟೆ ಗುರಿಯಾಗುತ್ತದೆ ಮತ್ತು ಸುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಹಾನಿ ಮಾಡದು. ಇದು ಮಕ್ಕಳ ಕ್ಯಾನ್ಸರ್ (NF-1, ರೆಟಿನೋಬ್ಲಾಸ್ಟೊಮಾ), ತಲೆ, ಕುತ್ತಿಗೆ, ಕಣ್ಣು, ಬೆನ್ನುಮೂಳೆ, ಯಕೃತ್ತು, ಸ್ತನ, ಪ್ರಾಸ್ಟೇಟ್ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳ ಗೆಡ್ಡೆಗಳಿಗೆ ಪರಿಣಾಮಕಾರಿಯಾಗಲಿದೆ.
2025ರ ವೇಳೆಗೆ 1.2 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಚಿಕಿತ್ಸೆ ಅವಶ್ಯಕವಾಗಬಹುದೆಂದು ಅಂದಾಜಿಸಲಾಗಿದೆ. ಈ ಕೇಂದ್ರವು ಕೇವಲ ರಾಜ್ಯಕ್ಕಷ್ಟೇ ಅಲ್ಲ, ಇಡೀ ದೇಶದ ಕ್ಯಾನ್ಸರ್ ಚಿಕಿತ್ಸೆ ಕ್ಷೇತ್ರಕ್ಕೆ ಆಧುನಿಕತೆಯನ್ನು ತಂದೊಡ್ಡಲಿದೆ. ಇದನ್ನು NIMHANS ಮತ್ತು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಿಂದ ಉಲ್ಲೇಖಿತ ರೋಗಿಗಳಿಗೆ ಸಹ ಬಳಸಲಾಗುತ್ತದೆ.
ಪ್ರೋಟಾನ್ ಥೆರಪಿಯ ಪ್ರಯೋಜನಗಳು:
- ಮಕ್ಕಳ ಗೆಡ್ಡೆಗಳಿಗೆ ಹೆಚ್ಚಿನ ಪರಿಣಾಮಕಾರಿತ್ವ
- ವೇಗವಾಗಿ ಚೇತರಿಕೆ
- ದ್ವಿತೀಯ ಕ್ಯಾನ್ಸರ್ ಸಂಭವನೆಯ ಕಡಿತ
- ದೀರ್ಘಕಾಲ ಬದುಕುಳಿಯುವಿಕೆ