Thursday, April 17, 2025
Google search engine

HomeUncategorizedರಾಷ್ಟ್ರೀಯವಯನಾಡು ಜಿಲ್ಲೆಯ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ನೀಡದ ಕೇಂದ್ರದ ವಿರುದ್ಧ ಪ್ರಿಯಾಂಕಾ ಪ್ರತಿಭಟನೆ

ವಯನಾಡು ಜಿಲ್ಲೆಯ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ನೀಡದ ಕೇಂದ್ರದ ವಿರುದ್ಧ ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ಭೀಕರ ಭೂಕುಸಿತಕ್ಕೆ ತತ್ತರಿಸಿರುವ ಕೇರಳದ ವಯನಾಡು ಜಿಲ್ಲೆಯ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ಪ್ಯಾಕೇಜ್ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಶನಿವಾರ) ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಸಂಸತ್ತಿನ ಆವರಣದಲ್ಲಿ ಕೇರಳದ ಸಂಸದರೊಂದಿಗೆ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಪ್ರತಿಭಟಿಸಿದ್ದಾರೆ.

ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕೇರಳದ ಸಂಸದರು ಆರೋಪ ಮಾಡಿದ್ದಾರೆ. ‘ಕೇರಳ ಭಾರತದಲ್ಲಿದೆ’, ‘ವಯನಾಡ್‌ಗೆ ನ್ಯಾಯ ದೊರಕಿಸಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

‘ವಯನಾಡಿಗೆ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರವು ನಿರಾಕರಿಸುತ್ತಿರುವುದು ತುಂಬಾ ನಿರಾಸೆಯನ್ನುಂಟು ಮಾಡಿದೆ. ನಾವು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿದ್ದೇವೆ. ಪ್ರಧಾನ ಮಂತ್ರಿಗೂ ಪತ್ರ ಬರೆದಿದ್ದೇವೆ. ನೈಸರ್ಗಿಕ ವಿಪತ್ತು ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ’ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

‘ವಯನಾಡಿನ ವಿನಾಶವನ್ನು ಇಡೀ ದೇಶವೇ ನೋಡಿದೆ. ಹರಿಯಾಣದಲ್ಲೂ ಇದಕ್ಕೆ ಸಮಾನವಾದ ವಿಪತ್ತು ಸಂಭವಿಸಿದೆ. ರಾಜಕೀಯದಿಂದಾಗಿ ಎರಡೂ ಕಡೆಗಳಿಗೂ ಕೇಂದ್ರ ಸರ್ಕಾರವು ನೆರವು ನೀಡುತ್ತಿಲ್ಲ’ ಎಂದು ಅವರು ಟೀಕಿಸಿದ್ದಾರೆ.

‘ಅವರೆಲ್ಲರೂ ಭಾರತೀಯ ಪ್ರಜೆಗಳು. ನೈಸರ್ಗಿಕ ವಿಕೋಪದ, ನೋವಿನ ಸಂದರ್ಭದಲ್ಲಿ ತಾರತಮ್ಯ ತೋರಬಾರದು. ರಾಜಕೀಯವನ್ನು ಬದಿಗಿಟ್ಟು ನೆರವನ್ನು ನೀಡಬೇಕಾದ ಸಮಯ ಇದಾಗಿದೆ. ಪ್ರಧಾನಿ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನ ರಕ್ಷಕನಾಗಬೇಕು’ ಎಂದು ಅವರು ಹೇಳಿದ್ದಾರೆ.

‘ಈಗಲಾದರೂ ಮಾನವೀಯ ನೆಲೆಯಲ್ಲಿ ವಯನಾಡು ಜನರಿಗೆ ಕೇಂದ್ರ ಸರ್ಕಾರ ಸಹಾಯ ಮಾಡುವ ನಿರೀಕ್ಷೆಯಲ್ಲಿದ್ದೇವೆ. ಏಕೆಂದರೆ ಇದು ರಾಜಕೀಯದಿಂದ ಹೊರತಾದ ವಿಷಯವಾಗಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

RELATED ARTICLES
- Advertisment -
Google search engine

Most Popular