ಕೊಪ್ಪಳ: ಕಾಂಗ್ರೆಸ್ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ವಕ್ಫ್ ಮಸೂದೆ ದುರುಪಯೋಗ ಮಾಡಿಕೊಂಡ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ. ಈ ಸರ್ಕಾರ ಜಮೀರ್ ಎನ್ನುವ ‘420’ ಸಚಿವನನ್ನು ಇಟ್ಟುಕೊಂಡು ಎಲ್ಲಾ ಭೂಮಿ ವಶಪಡಿಸಿಕೊಳ್ಳಲು ತರಾತುರಿಯಲ್ಲಿ ಸಾವಿರಾರು ಎಕರೆಗೆ ವಕ್ಫ್ ಹೆಸರು ಸೇರಿಸಿದ್ದಾರೆ ಎಂದು ಕಿಡಿಕಾರಿದರು.
ಚುನಾವಣೆಯಲ್ಲಿ ಹೊಡೆತ ಬೀಳುವ ಭಯದಲ್ಲಿ ಸಿಎಂ ಅವರು ಮೌಖಿಕವಾಗಿ ನೋಟಿಸ್ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ. ಅದರಿಂದ ಏನೂ ಆಗಲ್ಲ, ಕೂಡಲೇ ಎಮರ್ಜೆನ್ಸಿ ಕ್ಯಾಬಿನೆಟ್ ಮೀಟಿಂಗ್ ಮಾಡಿ ರದ್ದುಗೊಳಿಸಬೇಕಿತ್ತು. ಆದರೆ ಮೌಖಿಕವಾಗಿ ಹೇಳುವ ಮೂಲಕ ರೈತರ ಶಾಪಕ್ಕೆ ಗುರಿಯಾಗುತ್ತಾರೆ. ಅಹಿಂದ ಹೆಸರಲ್ಲಿ ಸಿಎಂ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ವಿನಾಶಕಾಲಕ್ಕೆ ವಿಪರೀತ ಬುದ್ಧಿ ಬಂದಿದೆ. ಇದು ಕೇವಲ ಹೋರಾಟದ ಪ್ರಾರಂಭ. ಕೂಡಲೇ ಹಿಂಪಡೆಯದೆ ಹೋದಲ್ಲಿ ಉಗ್ರರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಪಚುನಾವಣೆ ಫಲಿತಾಂಶದ ವಿಚಾರವಾಗಿ ಮಾತನಾಡಿ, ಸಿಎಂ ಅವರು ಚುನಾವಣಾ ಪೂರ್ವದಲ್ಲಿ 1,300 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಾರೆ. ಈ ಮತದಾರರು ಬದಲಾಗಿದ್ದಾರೆ ಎಂದು ತಿಳಿದಿದೆ. ಒಬ್ಬ ಸಿಎಂ ಅವರು ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡಿದ್ದಾರೆ. ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದನ್ನು ಎಲ್ಲರೂ ನೋಡಿದ್ದಾರೆ. ನಾವು ಕೇವಲ ಮೈಕ್ನಲ್ಲಿ ಅನೌನ್ಸ್ ಮಾಡ್ಕೊಂಡು ಪ್ರಚಾರ ಮಾಡಿದ್ದೀವಿ. ಸಿಎಂ ಅವರು ನಾಲ್ಕು ದಿನ ಸಂಡೂರಲ್ಲಿ ಇರುವುದನ್ನು ನೋಡಿದರೆ ಅವರು ಸೋಲು ಒಪ್ಕೊಂಡಿದ್ದಾರೆ ಎಂದು ಅರ್ಥ ಎಂದು ವ್ಯಂಗ್ಯವಾಡಿದರು.
ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಅನೇಕ ಕಾಂಗ್ರೆಸ್ ಶಾಸಕರು ಭಯಬೀತರಾಗಿದ್ದಾರೆ. ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. ಸಿಎಂ ಅವರ ಅಧಿಕಾರ ಹೋದರೆ ನನ್ನ ಅಧಿಕಾರ ಕೂಡ ಹೋಗತ್ತದೆ ಎಂದು ಶಿವರಾಜ ತಂಗಡಗಿ ಭಯದಲ್ಲಿದ್ದಾರೆ. ಸಿಎಂ ಇಡೀ ದಿನ ಗಾಬರಿಯಲ್ಲಿದ್ದಾರೆ. ಯಾವಾಗ ಇಡಿಯವರು ಬಂದು ಎತ್ತಾಕಿಕೊಂಡು ಹೋಗುತ್ತಾರೆ ಎನ್ನುವ ಭಯ ಶುರುವಾಗಿದೆ. ಇದೆ ಭಯದಲ್ಲಿಯೇ ಕಾಂಗ್ರೆಸ್ನ ಎಲ್ಲ ಶಾಸಕರು ಇದ್ದಾರೆ ಎಂದರು.