ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ರಾಜ್ಯ ಬೀಜ ನಿಗಮದಿಂದ ಬಿಜೋತ್ಪಾದಕ ರೈತರಿಗೆ ಪ್ರಕಟಿಸಿರುವ ಪ್ರಸಕ್ತ ಸಾಲಿನ ಬೆಲೆಯಲ್ಲಿ ಕಳೆದ ಬಾರಿಗಿಂತ ಪ್ರತಿ ಕ್ವಿಂಟಾಲ್ಗೆ ೨೦೦ ರಿಂದ ೯೦೦ರವರೆಗೆ ಕಡಿತವಾಗಿದೆ ಎಂದು ಬಿಜೋತ್ಪಾದಕ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಬೀಜ ನಿಗಮದ ಕಛೇರಿಯ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ರೈತರು ನಿಗಮದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಕೂಡಲೇ ಸಂಬoಧಿತ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ನಮಗಾಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೆ.ಎಂ.ಶ್ರೀನಿವಾಸ್ ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಖರ್ಚು ಶೇಕಡ ೩೦ ರಿಂದ ೫೦ ರಷ್ಟು ಹೆಚ್ಚಾಗುತ್ತಿದ್ದು ಇದರಿಂದ ಈಗಾಗಲೇ ನಾವೆಲ್ಲಾ ತೀವ್ರ ಸಂಕಷ್ಟದಲ್ಲಿದ್ದೇವೆ ಆದರೂ ನಿಗಮದ ಅಧಿಕಾರಿಗಳು ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿದ್ದು ಇದು ದುರದೃಷ್ಟಕರ ಎಂದರಲ್ಲದೆ ಈ ವಿಚಾರದಲ್ಲಿ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಇದರ ಜತೆಗೆ ನಿಗಮದ ಅಧಿಕಾರಿಗಳು ಕೆಲವು ಬಾರಿ ಭತ್ತದ ಬೆಲೆಯನ್ನು ನಾವು ಸರಬರಾಜು ಮಾಡುವವರೆಗೂ ನಿಗಧಿ ಮಾಡುವುದಿಲ್ಲ ಇದರಿಂದ ಗೊಂದಲವಾಗುತ್ತಿದ್ದು ಈ ವಿಚಾರವನ್ನು ಸಂಬoಧಿತರು ಅರಿತು ಪ್ರತಿ ವರ್ಷ ರೈತರು ನಿಗಮಕ್ಕೆ ಬೀಜದ ಭತ್ತ ಸರಬರಾಜು ಮಾಡುವ ಮುಂಚೆ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಆನಂತರ ಪ್ರತಿಭಟನಾ ನಿರತ ರೈತರು ನಿಗಮದ ಕಛೇರಿಗೆ ಮುತ್ತಿಗೆ ಹಾಕಿ ಅಲ್ಲಿನ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಇನ್ನೊಂದು ವಾರದಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಉಗ್ರ
ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಬೀಜೋತ್ಪಾದಕ ರೈತರಾದ ಡಿ.ಸಿ.ಕಾಂತರಾಜು, ಹೆಚ್.ವಿ.ನಾಗೇಶ್, ಗುರುಪ್ರಸಾದ್, ಬಿ.ಎಂ.ನಾಗರಾಜು, ಹೆಚ್.ಕೆ.ಬುಡೀಗೌಡ, ಮಹದೇವು, ಕೃಷ್ಣೇಗೌಡ, ಶ್ರೀಧರ್ಬಾಬು, ಆನಂದಯ್ಯ, ಶಂಕರಪ್ಪ, ರಾಜನಾಯಕ, ಮಂಜುನಾಥ್, ಮಲ್ಲಿಕಾರ್ಜುನ್, ನಾಗರಾಜೇಗೌಡ, ರಾಮಕೃಷ್ಣೇಗೌಡ, ಅಶೋಕ್, ಶೇಷೇಗೌಡ, ಚಿಕ್ಕರಾಮೇಗೌಡ, ಬಾಲಕೃಷ್ಣ ಮತ್ತಿತರರು ಹಾಜರಿದ್ದರು.