ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಲಾರಿ ಚಾಲಕರು ಮತ್ತು ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿರುವ ನಿಯಮ ಮರಣ ಶಾಸನವಾಗಿದ್ದು ಕೂಡಲೇ ಅದನ್ನು ರದ್ದು ಪಡಿಸಬೇಕು ಎಂದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಲಾರಿ ಮಾಲೀಕರು ಮತ್ತು ಚಾಲಕರು ಒತ್ತಾಯಿಸಿದರು.
ಕೇಂದ್ರದ ನಿಯಮವನ್ನು ವಿರೋಧಿಸಿ ಎರಡು ತಾಲೂಕುಗಳ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ತಾಲೂಕು ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-೨ ತಹಶೀಲ್ದಾರ್ ಬಾಲಸುಬ್ರಮಣ್ಯ ಅವರಿಗೆ ಮನವಿ ಸಲ್ಲಿಸಿದ ನಂತರ ಎಡತೊರೆ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪಿ.ಸುರೇಶ್ ಮಾತನಾಡಿ ಇಂತಹಾ ನಿಯಮಗಳು ನಮ್ಮನ್ನು ಬೀದಿಗೆ ತಳುತ್ತವೆ ಎಂದರು.
ದಿಡೀರ್ ನಿಯಮದಿಂದ ಮಾಲೀಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಕೂಡಲೇ ಕೇಂದ್ರ ಸರ್ಕಾರ ಇದನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ ಅಧ್ಯಕ್ಷರು ಕೇಂದ್ರ ಸರ್ಕಾರ ನಮ್ಮಗಳಿಗೆ ಸ್ಪಂದಿಸದಿದ್ದರೆ ನಿರಂತರವಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಸಹ ಸಾರ್ವಜನಿಕ ಸೇವೆ ಮಾಡುತ್ತಿದ್ದು ದೇಶದಲ್ಲಿ ಶೇ.೭೦ರಷ್ಟು ವ್ಯಾಪಾರ ಮತ್ತು ವಹಿವಾಟು ನಡೆಯುತ್ತಿರುವುದು ನಮ್ಮಿಂದಲೇ ಜತೆಗೆ ಪ್ರಸ್ತುತ ಶೇ.೫೦ರಷ್ಟು ಚಾಲಕರ ಕೊರತೆಯನ್ನು ದೇಶ ಎದುರಿಸುತ್ತಿದ್ದು ನಮ್ಮ ಸಂಕಷ್ಟಗಳನ್ನು ಅರಿತುಕೊಂಡು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಹೊಸ ನಿಯಮವನ್ನು ರದ್ದು ಪಡಿಸಬೇಕೆಂದು ಹೇಳಿದರು.
ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷ ಕೆ.ಎಲ್.ಜಯರಾಮ್, ಪದಾಧಿಕಾರಿಗಳಾದ ಹರೀಶ್, ಮಹೇಶ್, ಹೆಚ್.ಕೆ.ಸುರೇಶ್, ತಿಮ್ಮೇಗೌಡ, ಫಜಲ್, ಹಿನಾಯತ್, ರಫಿಕ್, ಸಫೀಕ್, ನಾಗರಾಜು, ಶ್ರೀಕಂಠಮೂರ್ತಿ, ಅರಸು, ಜಬೀಉಲ್ಲಾ, ರಮೇಶ್, ವಿರುಪಾಕ್ಷ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಹಾಜರಿದ್ದರು.