ಶ್ರೀರಂಗಪಟ್ಟಣ:ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆಗಾಗಿ ಕೆಆರ್ಎಸ್ ಜಲಾಶಯದ ಕಾವೇರಿ ಪ್ರತಿಮೆ ಬಳಿ ವರುಣ ಕೃಪೆಯ ಪರ್ಜನ್ಯ ಹೋಮ ನಡೆಯಿತು. ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆರಾಯ
ನಿಗಾಗಿ ಪ್ರಾರ್ಥನೆ ಸಲ್ಲಿಸಿ ಪೂಜಾ ಕೈಂಕರ್ಯಗಳ ಮಹಾಗಣಪತಿ ಪೂಜೆ, ಸಂಕಲ್ಪ ಬಳಿಕ ಜಪ ಮಾಡುವ ಮೂಲಕ ವೈದಿಕರು
ಆರಂಭಿಸಿದರು.
ಜಲಾಶಯದ ಕಾವೇರಿ ಪ್ರತಿಮೆ ಬಳಿ ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ವೈದಿಕ ತಂಡ ವಿಶೇಷವಾಗಿ ನವಗ್ರಹ ದೇವತೆಗಳ ಕಳಸಗಳನ್ನು ಸ್ಥಾಪಿಸಿ ಹೂವಿನಿಂದ ಅಲಂಕರಿಸಲಾಗಿತ್ತು.ನವಗ್ರಹ ದೇವತೆಗಳ ಮುಂಭಾಗದಲ್ಲಿ ಹೋಮಕುಂಡ ನಿರ್ಮಿಸಿ,ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಪೆ ತೋರದ ವರಣ ದೇವರ ಮೊರೆ ಹೋಗಿ ಮಳೆ ಬಿದ್ದು ಕೆಆರ್ಎಸ್ ಜಲಾಶಯ ಬೇಗ ಭರ್ತಿಯಾಗಲೆಂದು ನಮಿಸಿ ಪರ್ಜನ್ಯ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜೆ ಸಲ್ಲಿಸಿದರು.
ವೇದಬ್ರಹ್ಮ ಡಾ.ಭಾನುಪ್ರಕಾಶ ಶರ್ಮ ನೇತತ್ವದಲ್ಲಿ ೧೨ ಮಂದಿ ವೈದಿಕ ತಂಡದಿಂದ ಸಲಕ ಪೂಜಾ ಸಿದ್ದತೆ ಮಾಡಿಕೊಂಡು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ರೈತರಲ್ಲಿ ಆತಂಕ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಸದ್ಯ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದ್ದು,ಈ ಕುಸಿತದಿಂದ ನಾಲೆಗಳಿಗೆ ನೀರು ಹರಿಸದೆ ಕಬ್ಬು ಇತರ ಬೆಳೆಗಳು ನೀರಿಲ್ಲದೆ ಒಣಗಿ ಬಾಡುತ್ತಿದ್ದು, ಜೊತೆಗೆ ಕೆಆರ್ ಎಸ್ ಜಲಾಶಯದಲ್ಲಿ ೧೨೪.೮೦ ಅಡಿ ಗರಿಷ್ಠ ಮಟ್ಟದ ನೀರಿನಲ್ಲಿ ೮೧ಅಡಿಗೆ ಕುಸಿತ ಕಂಡಿದೆ. ಇದರಿಂದ ಮುಂದಿನ ಮುಂಗಾರು ಬೆಳೆಗೆ ನೀರನ್ನು ನಾಲೆಗಳಿಗೆ ಹರಿಸುವುದಿಲ್ಲವೇನೋ ಎಂಬ ಅತಂಕ ರೈತರಲ್ಲಿ ಮನೆ ಮಾಡಿದೆ.
ಹೀಗಾಗಿ ಶಾಸಕರ ಮುಂದಾಳತ್ವದಲ್ಲಿ ಮಳೆಗಾಗಿ ಪರ್ಜನ್ಯ ಹೋಮದ ಮೊರೆಹೋಗಿದ್ದಾರೆ.
ಮಂತ್ರ ಪಠಣ:ನದಿಯಲ್ಲಿ ಕುಳಿತು ಉತ್ತಮ ಮಳೆಗಾಗಿ ಪ್ರಾರ್ಥನೆ ಮಾಡುವ ಪ್ರತೀತಿಯಂತೆ , ಜಲಾಶಯದಲ್ಲಿ ಕುಳಿತು ಜಪ ಮಾಡಲು ಸಾಧ್ಯವಾಗದ ಬದಲು ಜಲಾಶಯದ ಬಳಿ ಕಾವೇರಿ ನೀರು ತುಂಬಿದ ದೊಡ್ಡ ಪಾತ್ರೆಯೊಳಗೆ ಕುಳಿತು ಮೂವರು ಹಿರಿಯ ವೈದಿಕರಿಂದ ಮೂಲಮಂತ್ರ ಜಪ ಮಂತ್ರ ಪಠಣೆ ಮಾಡಿದರು.
ನೀರು ಹರಿಸಲು ಗೊಂದಲವಿಲ್ಲ; ಜಲಾಶಯದಲ್ಲಿ ಈಗಿರುವ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ.ಇದೀಗ ಜಲಾಶಯದಲ್ಲಿ ೮೧ ಅಡಿಗಳಿದ್ದು, ೬೦ ಅಡಿವರೆಗೂ ನಾಲೆಗಳಿಗೆ ನೀರು ಹರಿಸ ಬಹುದಾಗಿದೆ.ಉಳಿದ ನೀರನ್ನು ಕುಡಿಯುಲು ಬಳಸಿಕೊಂಡು ಬೆಳೆಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ. ಇದರಲ್ಲಿ ರೈತರಿಗೆ ಗೊಂದಲ ಬೇಡ ರೈತರು ಮುಂಗಾರು ಬೆಳೆ ಬೆಳೆಯಬಹುದು ಸರ್ಕಾರ ನಾಲೆಗಳಿಗೆ ನೀರು ಹರಿಸಲು ಸೂಚನೆ ನೀಡಿದೆ ಅಧಿಕಾರಿಗಳು ಸಹ ಸಹಮತ ನೀಡಿದ್ದಾರೆ ಎಂದು ಶಾಸಕರು ,ಸಂಪ್ರದಾಯ ಪೂಜೆಯ ವಿವರಗಳ ನೀಡಿದರು.
ಈ ಬಾರಿ ಹೆಚ್ಚಿನ ಮಳೆ ಬರಲು ತಡವಾದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಳೆಗಾಗಿ ಪೂಜೆ ಸಲ್ಲಿಸುವಂತೆ ಈ ಬಾರಿಯು ಸಹ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆ ಬಂದು ಜಲಾಶಯ ಭರ್ತಿಯಾಗಲು ಪೂಜಾ ಸಂಪ್ರದಾಯಗಳನ್ನು ಮಾಡಲಾಗುತ್ತಿದೆ.ವರುಣ ಕೃಪೆಗೆ ವೈದಿಕ ತಂಡದಿಂದ ವಿಶೇಷವಾಗಿ ಪರ್ಜನ್ಯ ಮಂತ್ರ ಹಾಗೂ ಪರ್ಜನ್ಯ ಹೋಮ ನೇರವೇರಿಸಲಾಗಿದೆ . ಕಾವೇರಿ ಮಾತೆ ಜನರ ಸಂಕಷ್ಟಗಳಿಗೆ ಅಡ್ಡಿ ಮಾಡದೆ ಜಲಾಶಯ ಭರ್ತಿಯಾಗಲೆಂದು ಈ ಪೂಜೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.