ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸದಾ ಚೇತನದ ಚಿಲುಮೆಯಾಗಿ ಕಾಯಕ ಸೇವೆಯಲ್ಲಿ ತೊಡಗಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದ ಪುನೀತ್ ರಾಜಕುಮಾರ್ ಯುವ ಜನತೆಗೆ ಮಾದರಿಯಾದ ನಾಯಕ ಎಂದು ಪುರಸಭೆ ಅಧ್ಯಕ್ಷ ಶಿವುನಾಯಕ್ ಹೇಳಿದರು.
ಪಟ್ಟಣದ 7ನೇ ರಸ್ತೆಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ 50ನೇ ವರ್ಷದ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂತಹ ನಟ ನಮ್ಮನ್ನು ಅಗಲಿದ್ದು ವಿಷಾದನೀಯ ಎಂದರು.
ಸೂರ್ಯ ಮತ್ತು ಚಂದ್ರರು ಇರುವವರೆಗೂ ಆ ಮಹಾ ನಟನ ಹೆಸರು ಎಲ್ಲರ ಜನ ಮಾನಸದಲ್ಲಿ ಅಜರಾಮರವಾಗಲಿದ್ದು ತಮ್ಮ ನಟನೆಯ ಮೂಲಕ ಮನೆ ಮಾತಾಗಿದ್ದ ಅವರು ಕನ್ನಡ ಚಿತ್ರರಂಗದ ಹಿರಿಮೆ ಆಕಾದೆತ್ತರಕ್ಕೆ ಏರುವಂತೆ ಮಾಡಿದ ಮಹಾ ಪುರುಷ ಎಂದು ಬಣ್ಣಿಸಿದರು.
ಪುನೀತ್ ರಾಜಕುಮಾರ್ ಅವರ ನಟನೆಯ ರಾಜಕುಮಾರ ಚಿತ್ರವನ್ನು ನೋಡಿದ ನಂತರ ರಾಜ್ಯದ ಸಾವಿರಾರು ಮಂದಿ ತಮ್ಮ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಕೆಲಸ ಮಾಡಿದರು ಹಾಗಾಗಿ ಅವರ ಚಿತ್ರಗಳು ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿದ್ದವು ಎಂದ ಪುರಸಭೆ ಅಧ್ಯಕ್ಷರು ಇಂತಹ ನಟ ಇನ್ನಷ್ಟು ವರ್ಷ ನಮ್ಮ ನಡುವೆ ಬದುಕಿದ್ದರೆ ಸಾಮಾಜಿಕವಾಗಿ ಅನುಕೂಲವಾಗುತಿತ್ತು ಎಂದು ನುಡಿದರು.
ಕೊಡಗೈ ದಾನಿಯಾಗಿದ್ದ ಅವರು ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದಲ್ಲದೆ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿ ಅವರ ಬಾಳಿನಲ್ಲಿ ಬೆಳಕಾಗಿದ್ದರು ಹಾಗಾಗಿ ಭಗವಂತ ಅವರ ಆತ್ಮಕ್ಕೆ ಶಾಶ್ವತ ಶಾಂತಿ ನೀಡುವುದರೊಂದಿಗೆ ಮತ್ತೊಮ್ಮೆ ನಮ್ಮ ಪುನೀತ ಕರುನಾಡಿನಲ್ಲಿ ಹುಟ್ಟಬೇಕೆಂದು ಬಯಸಿದರು.
ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ನೂರಾರು ಅಭಿಮಾನಿಗಳು ಅವರ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡಿ ಮಹಾ ನಟನಿಗೆ ಜಯಕಾರದ ಘೋಷಣೆ ಮೊಳಗಿಸಿದರು.
ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಮಂಜು ಕೆಂಪೇಗೌಡ, ಆದಿ, ಸಂದೇಶ್, ಚಂದ್ರಾಚಾರ್, ನಾಗೇಶ್, ಕೆ. ವಿನಯ್, ಕೆ.ಪಿ. ಜಗದೀಶ್ ಮತ್ತಿತರರು ಇದ್ದರು.