ರಾಯಚೂರು: ನಡುರಸ್ತೆಯಲ್ಲೇ ಕಾರು ಏಕಾಏಕಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಭಯಾನಕ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಸಂಭವಿಸಿದೆ. ಘಟನೆಯಿಂದ ಕಾರು ಸಂಪೂರ್ಣವಾಗಿ ನಾಶವಾಗಿದೆ. ಆದರೆ ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಚಾಲಕ ದಯಾನಂದ್ ಪಾಟೀಲ್ ಹಿರೆಬೂದೂರಿನಿಂದ ರಾಯಚೂರಿಗೆ ಡಸ್ಟರ್ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಮಾರ್ಗಮಧ್ಯೆ ಗಬ್ಬೂರಿನಲ್ಲಿ ಎಳೆನೀರು ಕುಡಿಯಲು ಕಾರಿನಿಂದ ಇಳಿದಿದ್ದರು. ಈ ವೇಳೆ ನೋಡನೋಡುತ್ತಲೇ ಇಂಜಿನ್ನಿಂದ ದಟ್ಟ ಹೊಗೆ ಆವರಿಸಿ, ಬಳಿಕ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯಿಂದಾಗಿ ಹೆದ್ದಾರಿಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಕೆಎ17ಎಕ್ಸ್5057ನಂಬರ್ನ ಡಸ್ಟರ್ ಕಾರು ಬೆಂಕಿಗಾಹುತಿಯಾಗಿದೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.