ದೆಹಲಿ: ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೊಸದಾಗಿ ನಿರ್ಮಾಣವಾಗಿರುವ ಸಂಸತ್ ಭವನ ಕೂಡ ಸೋರುತ್ತಿದೆ. ಸಂಸತ್ ಭವನದ ಸುತ್ತ ಮುತ್ತಲು ಸಂಪೂರ್ಣವಾಗಿ ಜಲಾವೃತಗೊಂಡಿದೆ. ವಿರೋಧ ಪಕ್ಷಗಳು ಹಳೆಯ ಸಂಸತ್ತಿಗೆ ಹೋಲಿಕೆ ಮಾಡಲಾರಂಭಿಸಿವೆ.
ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಈ ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತು ಉತ್ತಮವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಸಂಸತ್ತಿನಲ್ಲಿ ನೀರು ಸುರಿಯುತ್ತಿರುವವರೆಗೂ ಹಳೆ ಸಂಸತ್ತಿನಲ್ಲಿ ಮತ್ತೆ ಏಕೆ ಕೆಲಸ ಮಾಡಬಾರದು ಎಂದು ಬರೆದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹೊರಗೆ ಪೇಪರ್ ಲೀಕ್ ಒಳಗೆ ನೀರು ಲೀಕ್ ಎಂದು ಬರೆದಿದ್ದಾರೆ.
ಭಾರಿ ಮಳೆಯಿಂದಾಗಿ ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದ ರಾಬಿನ್ ಚಿತ್ರಮಂದಿರದ ಬಳಿ ಮನೆ ಕುಸಿದು ಒಬ್ಬರು ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ನೈಋತ್ಯ ದೆಹಲಿಯ ವಸಂತ್ ಕುಂಜ್ ನಲ್ಲಿ ಗೋಡೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ.