ಹಾಸನ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳು ಕಳೆದಿದೆ. ಎಲ್ಲಾ ಕಡೆ ಹೋಗಿ ಸಣ್ಣ ಪುಟ್ಟ ಸಭೆ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಏನು ಕೆಲಸ ಮಾಡಿದ್ದಾರೆ ಎಂದು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಹಿನ್ನಲೆ ಗೊತ್ತಿದ್ದರೆ ಮುನ್ನಲೆ ಬರೆಯಬಹುದು ಎಂದು ಕಾಂಗ್ರೆಸ್ ಹಾಗೂ ಅಭ್ಯರ್ಥಿ ವಿರುದ್ದ ಮೈತ್ರಿ ಅಭ್ಯರ್ಥಿ, ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ಮಾಡಿದ್ದಾರೆ.
ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಜನರ ಕಣ್ಣುವರೆಸುವುದು ಬಹಳ ಮುಖ್ಯ. ಈಗಿನ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಜನರನ್ನು ಬಂದು ಮಾತನಾಡಿಸಿದ್ದಾರೆ. ಯಾರದ್ದಾದರೂ ಕಣ್ಣೀರು ಒರೆಸಿದ್ದಾರಾ. ಅವರದ್ದೇ ಸರ್ಕಾರ ಇದೆಯಲ್ಲಾ ಒಮ್ಮೆಯಾದರೂ ನಿಮ್ಮ ಬಳಿ ಬಂದು ಕಷ್ಟ ಕೇಳಿದ್ದಾರಾ ಎಂದು ಕಿಡಿಕಾಡಿದ್ದಾರೆ.
ದೇವೇಗೌಡರು, ಮೋದಿಯವರ ಆಶೀರ್ವಾದದಿಂದ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದೇನ ಹಾಸನ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಯ ಕೊಡುಗೆ ಏನು ಅಂತಹವರಿಗೆ ಏಕೆ ಮತ ಹಾಕಬೇಕು. ಕೊರೊನಾ ಸಂದರ್ಭದಲ್ಲಿ ಜನರು ನರಳುತ್ತಿದ್ದಾಗ ಇವರು ಐದು ವರ್ಷ ಎಲ್ಲಿದ್ದರು. ಕೊರೊನಾ ವೇಳೆ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಮೊಸಳೆ ಕಣ್ಣೀರು ಹಾಕಿಕೊಂಡು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.