ಬೆಂಗಳೂರು: ಜಾತಿ ನಿಂದನೆ ಹಾಗೂ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಅತ್ಯಾಚಾರ ಪ್ರಕರಣ ಸಂಕಷ್ಟ ತಂದೊಡ್ಡಿದೆ. ಶುಕ್ರವಾರ ಬಂಧನಕ್ಕೊಳಗಾಗಿದ್ದ ಅವರನ್ನು ಶನಿವಾರ (ಇಂದು) ಕೋರ್ಟ್ಗೆ ಹಾಜರುಪಡಿಸಲಾಯಿತು. ಇದೀಗ ಅಕ್ಟೋಬರ್ 5ರ ವರೆಗೆ ಅಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಹಿನ್ನಲೆ
ಶಾಸಕ ಮುನಿರತ್ನ ಸೇರಿದಂತೆ ಒಟ್ಟು ೭ ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಕಗ್ಗಲೀಪುರದ ಖಾಸಗಿ ರೆಸಾರ್ಟ್ನಲ್ಲಿ ಅತ್ಯಾಚಾರ ನಡೆದಿರುವುದಾಗಿ ೪೦ ವರ್ಷ ವಯಸ್ಸಿನ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು.
ದೂರಿನ ಅನ್ವಯ ಪೊಲೀಸರು Information Technology Act ೨೦೦೦, ಐಪಿಸಿ ಸೆಕ್ಷನ್ ೩೫೪ಎ, ೩೫೪ಸಿ, ೩೭೬, ೫೦೬, ೫೦೪, ೧೨೦(ಬಿ), ೧೪೯, ೩೮೪, ೪೦೬, ೩೦೮ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಮುನಿರತ್ನ ನಾಯ್ಡು (ಎ೧), ವಿಜಯ್ ಕುಮಾರ್ (ಎ೨), ಸುಧಾಕರ (ಎ೩), ಕಿರಣ್ ಕುಮಾರ್ (ಎ೪), ಲೋಹಿತ್ ಗೌಡ (ಎ೫), ಮಂಜುನಾಥ (ಎ೬), ಲೋಕಿ (ಎ೭) ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.