ಬೆಂಗಳೂರು: ನವೆಂಬರ್ 13 ರಿಂದ 19ರ ವರೆಗೆ ನಡೆಯಬೇಕಿದ್ದ ಭಾರತ ‘ಎ’ ಮತ್ತು ಸೌತ್ ಆಫ್ರಿಕಾ ‘ಎ’ ನಡುವಿನ ಏಕದಿನ ಸರಣಿಯನ್ನು ಬೆಂಗಳೂರು ಬದಲು ರಾಜ್ಕೋಟ್ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ನಿರ್ದಿಷ್ಟ ಕಾರಣವನ್ನು ನೀಡದಿದ್ದರೂ, ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಪರಿಣಾಮವಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ಮಹಿಳಾ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯ ಕೂಡ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.
ಮುಂಬರುವ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, 2026ರ ಟೂರ್ನಿಗೆ ಬಿಸಿಸಿಐ ತಾತ್ಕಾಲಿಕವಾಗಿ ನಿಗದಿ ಮಾಡಿದ ಆತಿಥ್ಯ ಕ್ರೀಡಾಂಗಣಗಳಲ್ಲಿ ಬೆಂಗಳೂರು ಸೇರಿದ್ದರೂ, ಈ ನಿರ್ಧಾರದಿಂದ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಆತಿಥ್ಯದ ಅವಕಾಶ ತಪ್ಪುವ ಸಾಧ್ಯತೆ ಉಂಟಾಗಿದೆ.