ಬೆಂಗಳೂರು: ದೈಹಿಕ ಸಂಪರ್ಕ ನಿರಾಕರಿಸುವುದು ಐಪಿಸಿ ಸೆಕ್ಷನ್ 498ಎ ಅಡಿ ದೌರ್ಜನ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಆದೇಶ ಹೊರಡಿಸಿದೆ. ಆಧ್ಯಾತ್ಮಿಕ ಸಾಧನೆಯತ್ತ ಮುಖಮಾಡಿದ್ದ ಪತಿ ವಿರುದ್ಧ ಪತ್ನಿ ಐಪಿಸಿ 498 ಎ ಅಡಿ ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕದಸದಸ್ಯ ಪೀಠ, ಈ ಆದೇಶ ಹೊರಡಿಸಿದೆ.
ಮಹಿಳೆಯೊಬ್ಬರು 2019 ರ ಡಿ.18 ರಂದು ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ವಿವಾಹವಾಗಿ 28 ದಿನ ಜೊತೆಯಲ್ಲಿದ್ದರು. ಇದಾದ ನಂತರ ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಮುಖ ಮಾಡಿದ್ದಾರೆ. ಅಲ್ಲದೆ, ದೈಹಿಕ ಪ್ರೀತಿಗಿಂತ, ಆತ್ಮಗಳ ಪ್ರೀತಿ ಮುಖ್ಯವೆನ್ನುತ್ತಿದ್ದ ಪತಿ, ಅಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸುವಂತೆ ತನ್ನ ಪತ್ನಿಗೆ ಹೇಳುತ್ತಿದ್ದರು.
ಪತಿಯ ನಡೆಯಿಂದ ಮನನೊಂದ ಪತ್ನಿ ದೈಹಿಕ ಸಂಬಂಧ ಬಯಸದ ಪತಿ ವಿರುದ್ಧ ಪತ್ನಿ ಐಪಿಸಿ 498 ಎ ಅಡಿ ದೂರು ದಾಖಲಿಸಿದ್ದರು. ಅಲ್ಲದೆ, ಕ್ರೌರ್ಯದ ಕಾರಣಕ್ಕೆ ವಿಚ್ಚೇದನವನ್ನೂ ಪಡೆದುಕೊಂಡಿದ್ದರು. ಈ ಬಗ್ಗೆ ಆದೇಶ ಹೊರಡಿಸುವ ವೇಳೆ ಏಕಸದಸ್ಯ ಪೀಠವು, “ದೈಹಿಕ ಸಂಬಂಧ ನಿರಾಕರಿಸುವ ಕಾರಣಕ್ಕೆ ವಿಚ್ಚೇದನ ಪಡೆಯಬಹುದು. ಆದರೆ ಐಪಿಸಿ ಸೆ.498 ಎ ಅಡಿ ಇದು ಅಪರಾಧವಾಗುವುದಿಲ್ಲ” ಎಂದು ಹೇಳಿದೆ.