ಚೆನ್ನೈ: ‘ಒರು ಕಿಟೈನ್ ಕರುಣಾ ಮನು’ ಮತ್ತು ‘ಸತ್ಯತ್ರಿಕ’ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ ಶುಕ್ರವಾರ(ನ15) ರಂದು ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.
ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದ ಸುರೇಶ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚೆನ್ನೈ ನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಇತ್ತೀಚಿಗೆ ಯೋಗಿ ಬಾಬು ಅಭಿನಯದ ‘ಕೆನಾಥ ಕಾನೋಮ್’ ಚಿತ್ರವನ್ನು ನಿರ್ದೇಶಿಸಿದ್ದ ಸುರೇಶ್ ಸಂಗಯ್ಯ ಚಿತ್ರ ಬಿಡುಗಡೆಗೆ ಮುನ್ನವೇ ಅನಾರೋಗ್ಯದಿಂದ ಇಹಲೋಕ ತ್ಯಜಿಸಿರುವುದು ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.
ಸುರೇಶ್ ಸಂಗಯ್ಯ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ತಮಿಳು ಸಿನಿಮಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಿರ್ದೇಶಕ ಮಣಿಕಂದನ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಸುರೇಶ್ ಮುಂದೆ ತಮ್ಮದೇ ಶೈಲಿಯಲ್ಲಿ ಗ್ರಾಮೀಣ ಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದರು.
ಸುರೇಶ್ ಸಂಗಯ್ಯ ಅವರ ಚೊಚ್ಚಲ ನಿರ್ದೇಶನದ 2017 ರಲ್ಲಿ ತೆರೆ ಕಂಡ ‘ಒರು ಕಿಟೈನ್ ಕರುಣಾ ಮನು’ ಚಿತ್ರವು ವಿಮರ್ಶಕರ ಮೆಚ್ಚುಗೆ ಗಳಿಸುವ ಮೂಲಕ ಹಲವು ಪ್ರಶಸ್ತಿಗಳನ್ನೂ ಗೆದ್ದುಕೊಂಡಿತು. ಆ ನಂತರ 2023ರಲ್ಲಿ ಸುರೇಶ್ ಸಂಗಯ್ಯ ಅವರು ‘ಸತ್ಯ ತ್ರಿಕೆ’ ಚಿತ್ರವನ್ನು ನಿರ್ದೇಶಿಸಿದ್ದರು.
ಸುರೇಶ್ ಸಂಗಯ್ಯ ಅವರು ಯೋಗಿ ಬಾಬು ಅವರ ‘ಕೆನಾಥ ಕಾನೋಮ್’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರದಲ್ಲಿ ಜಾರ್ಜ್ ಮೇರಿಯನ್, ರಾಚೆಲ್ ರೆಬೆಕಾ ಮತ್ತು ರಾಮಕೃಷ್ಣನ್ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ OTT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿತ್ತು ಎಂದು ಹೇಳಲಾಗಿದೆ.
ಸುರೇಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.