Saturday, April 19, 2025
Google search engine

Homeಸ್ಥಳೀಯಆದಿವಾಸಿ ಕುಟುಂಬಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

ಆದಿವಾಸಿ ಕುಟುಂಬಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

ಮೈಸೂರು: ಹಕ್ಕುಪತ್ರಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಹೆಚ್.ಡಿ.ಕೋಟೆ ಭಾಗದ ೩೩೧೮ ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡದಿರುವುದು ಬೇಸರ ಉಂಟಾಗಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರಿಗೂ ಹಕ್ಕುಪತ್ರ ನೀಡಿಯೇ ಸಿದ್ದ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಆದಿವಾಸಿ ಜನರಿಗೆ ಭರವಸೆ ನೀಡಿದರು.
ಎಚ್.ಡಿ.ಕೋಟೆ ತಾಲೂಕಿನ ಸೊಳ್ಳೇಪುರ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸಹ ಯೋಜನೆಗಳನ್ನು ತಲುಪಿಸುವ ಸಲುವಾಗಿ, ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿ ಅರಿಯಲು ಅಲ್ಲೇ ವಾಸ್ತವ್ಯ ಹೂಡಲು ಆರಂಭಿಸಿದ್ದೇನೆ. ಆದಿವಾಸಿಗಳಿಗೆ ಆದ ನೋವನ್ನು, ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿರುವ ಸಮಸ್ಯೆ ಮತ್ತು ನೋವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ. ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಯೇ ಒದಗಿಸುತ್ತೇನೆ ಎಂದು ತಿಳಿಸಿದರು.
ಆದಿವಾಸಿಗಳ ಕಷ್ಟ ಕಾರ್ಪಣ್ಯಗಳನ್ನು ಅರಿಯಲು ನಾನು ಹಾಡಿ ವಾಸ್ತವ್ಯ ಹಮ್ಮಿಕೊಂಡಿದ್ದೇನೆ. ಮುಂದಿನ ವರ್ಷದೊಳಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಕೊನೆ ಹಾಡಲಾಗುವುದು ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಆಶ್ರಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಮೊರಾರ್ಜಿ ಶಾಲೆಗೆ ಅಥವಾ ಏಕಲವ್ಯ ಶಾಲೆಗೆ ಸೇರಿಸುವ ಯೋಜನೆ ಜಾರಿಗೊಳಿಸಲಾಗುವುದು. ಆದಿವಾಸಿಗಳ ಮನೆ ನಿರ್ಮಾಣಕ್ಕೆ ೫ ಲಕ್ಷ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಆದಿವಾಸಿಗಳಿಗೆ ನೀಡುತ್ತಿದ್ದ ಆರು ತಿಂಗಳ ಆಹಾರ ಪಡಿತರವನ್ನು ಒಂದು ವರ್ಷಕ್ಕೆ ನೀಡಲು ತೀರ್ಮಾನಿಸಿದ್ದು ಸಚಿವ ಬಿ.ನಾಗೇಂದ್ರ ಎಂದು ತಿಳಿಸಿದರು.
ಆದಿವಾಸಿಗಳ ಅಭಿವೃದ್ಧಿಗಾಗಿ ಸದನದಲ್ಲಿ ನಾನು ಮಾತನಾಡುತ್ತಿದ್ದೇನೆ. ಆದಿವಾಸಿಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕೇ ಹೊರತು, ಅವರವರ ಹಿತಾಸಕ್ತಿಗೆ ಜೀವನ ನಡೆಸುವಂತೆ ಕಾಣುತ್ತಿದೆ. ಹೀಗಾದರೆ ಆದಿವಾಸಿಗಳ ಉದ್ಧಾರ ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಆದಿವಾಸಿ ಮುಖಂಡ ಕಾಳ ಕಲ್ಕರ್ ಆದಿವಾಸಿಗಳ ಸಮಸ್ಯೆಗಳನ್ನು ಬಿಚ್ಚಿಡುತ್ತಾ ಮಾತನಾಡಿ, ತಾಲೂಕಿನಲ್ಲಿ ಗಿರಿಜನ ಆಶ್ರಮಶಾಲೆಯನ್ನು ಹೆಸರಿಗಷ್ಟೇ ತೆರೆಯಲಾಗಿದೆ. ಈ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ, ಖಾಯಂ ವಾರ್ಡನ್ ಗಳಿಲ್ಲ, ಗುಣಮಟ್ಟದ ಶಿಕ್ಷಣ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಹಿನ್ನಲೆ ಈ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಪುನರ್ವಸತಿ ನೆಪವೊಡ್ಡಿ ೩೩೧೮ ಕುಟುಂಬಗಳನ್ನು ಮೂಲಸೌಕರ್ಯವನ್ನು ನೀಡದೇ ಕಾಡಿನಿಂದ ಹೊರಹಾಕಿದ್ದು ಉತ್ತಮ ಸೌಕರ್ಯವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸಹ ಒತ್ತಾಯಿಸಿದರು.
ಜಿಲ್ಲಾ ಸಮನ್ವಯಾಧಿಕಾರಿ ಮುನಿ ರಾಜೇಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಕಲ್ಲೇಶ್, ವಾಲ್ಮೀಕಿ ನಿಗಮದ ಪದ್ಮನಾಭ, ಜಂಟಿ ನಿರ್ದೇಶಕ ರಾಜಕುಮಾರ್, ನಾಗರಹೊಳೆ ಅಭಯಾರಣ್ಯದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸ್.ಸಿ ಎಸ್.ಟಿ ಅಭಿವೃದ್ದಿ ಇಲಾಖೆಯ ಸುರೇಶ್, ತಾಲೂಕು ದಂಡಾಧಿಕಾರಿ ಸಣ್ಣರಾಮಪ್ಪ, ಚಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ರಾಜೇಗೌಡ, ಬೇಗೂರು ಗ್ರಾ.ಪಂ ಅಧ್ಯಕ್ಷ ಶೈಲೇಂದ್ರ, ಮೈಮುಲ್ ನಿರ್ದೇಶಕ ಈರೇಗೌಡ, ಪರಶಿವಮೂರ್ತಿ, ಎಚ್.ಸಿ ನರಸಿಂಹಮೂರ್ತಿ, ವಿಜಯಕುಮಾರ್, ಇಓ ಧರಣೇಶ್, ವೆಂಕಟೇಶ್ ಪ್ರಸಾದ್ ಇದ್ದರು.

RELATED ARTICLES
- Advertisment -
Google search engine

Most Popular