ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಬೇವಿನ ಮರಕ್ಕೆ ಪೂಜಿಸುವ ಮೂಲಕ ಯುಗಾದಿ ಸಂಭ್ರಮ ಆಚರಿಸಿ ಬೇವು ಬೆಲ್ಲ ವಿತರಿಸಿ ಪರಸ್ಪರ ಯುಗಾದಿ ಶುಭಾಶಯಗಳು ವಿನಿಮಯ ಮಾಡಲಾಯಿತು.

ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಯುಗಾದಿ ಸಂಭ್ರಮ 2025 ಕಾರ್ಯಕ್ರಮವನ್ನು ಹಿರಿಯ ನಾಗರಿಕರಾದ, ನಿವೃತ್ತ ಮುಖ್ಯ ಶಿಕ್ಷಕರಾದ ಎನ್ ರಾಜಗೋಪಾಲ್ ಉದ್ಘಾಟನೆ ನೆರವೇರಿಸಿ ಯುಗಾದಿ ಹಬ್ಬದ ಮೂಲಕ ಹೊಸ ಹೊಸ ಆಲೋಚನೆಗೆ ,ಅಭಿವೃದ್ಧಿಗೆ ಸಂಕಲ್ಪ ಮಾಡುವ ಮೂಲಕ ಅಭಿವೃದ್ಧಿ ಸಾಧಿಸೋಣ ಸುಖವಾದ ಜೀವನವನ್ನು ಪ್ರತಿಯೊಬ್ಬರು ಅರಿತು ಸಾಗೋಣ ಎಂದರು.
ಬ್ರಾಹ್ಮಿ ಮಹಿಳಾ ಸಂಘದ ಗೌರವಾಧ್ಯಕ್ಷರಾದ ವತ್ಸಲಾ ರಾಜಗೋಪಾಲ್ ಮಾತನಾಡಿ ನಾವೆಲ್ಲರೂ ಉತ್ತಮ ಬದುಕನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಹೊಸ ಜೀವನ ನಡೆಸಲು ಹಬ್ಬಗಳು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಕುಸುಮ ಋಗ್ವೇದಿ ಮಾತನಾಡಿ ವಿಶ್ವ ವಸು ಸಂವತ್ಸರವು ಸಮಸ್ತ ಲೋಕಕ್ಕೆ ಕಲ್ಯಾಣವನ್ನುಂಟು ಮಾಡಲಿ. ಪ್ರಕೃತಿಯನ್ನು ಪೂಜಿಸುವ ಮೂಲಕ ನಾವೆಲ್ಲರೂ ಭಗವಂತನಲ್ಲಿ ಶರಣಾಗಿ ,ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳೋಣ . ಪ್ರೀತಿ ,ವಿಶ್ವಾಸ ಸಹಕಾರ ಭಾವನೆಯಿಂದ ನಾವೆಲ್ಲರೂ ಕೂಡಿ ಬಾಳೋಣ. ಹಬ್ಬಗಳು ನಮಗೆ ಈ ಸಂಕಲ್ಪವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಪೂಜಿಸುವ ಮೂಲಕ ಪ್ರಕೃತಿಯನ್ನು ಪೂಜಿಸಿ, ಪ್ರಕೃತಿ ಮಾನವನಿಗೆ ನೀಡುವ ಅನಂತ ಅನಂತ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸೋಣ. ಮರ ಗಿಡಗಳ ಪೋಷಣೆ ರಕ್ಷಣೆ ಹಾಗೂ ಪ್ರೀತಿಸುವ ಮೂಲಕ ನಮ್ಮ ಪ್ರಕೃತಿಯ ಕೊಡುಗೆಗಳಾದ ನದಿ ಸರೋವರ, ಸಾಗರ, ಬೆಟ್ಟಗುಡ್ಡ, ಮರ ಗಿಡಗಳನ್ನು, ಪರ್ವತಗಳನ್ನು ನಾವೆಲ್ಲರೂ ಹಾಳು ಮಾಡದೆ ಸಂರಕ್ಷಿಸೋಣ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ಯುವ ಪೀಳಿಗೆಗೆ ಹಬ್ಬಗಳ ವಿಶೇಷ ಮತ್ತು ಪ್ರಕೃತಿಯ ರಹಸ್ಯಗಳನ್ನು ತಿಳಿಸುವುದೇ ಆಗಿದೆ. ಯುಗಾದಿ ವಿಶ್ವ ವಸು ಸಂವತ್ಸರವು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ ಎಂದು ಹಾರೈಸಿದರು.
ಋಗ್ವೇದಿ ಯೂತ ಕ್ಲಬ್ ಅಧ್ಯಕ್ಷ ಶರಣ್ಯ, ಮುರುಗೇಶ, ಅಮೃತ ,ಸಾನಿಕ, ಶ್ರಾವ್ಯ, ಮಾಲ ಮುಂತಾದವರು ಇದ್ದರು.