ಮಂಗಳೂರಿನ ಉಳ್ಳಾಲ ಪಟ್ಟಣದಲ್ಲಿ ಅಂಡರ್ಗ್ರೌಂಡ್ ವಿದ್ಯುತ್ ಕೇಬಲಿಂಗ್ ಯೋಜನೆಗೆ ರಾಜ್ಯ ಸರ್ಕಾರ 186 ಕೋಟಿ ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಹಾಗೂ ಮಂಗಳೂರು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರು
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಉಳ್ಳಾಲ ಪಟ್ಟಣದ ಸುಂದರೀಕರಣ ಯೋಜನೆಯ ಭಾಗವಾಗಿ ಅಂಡರ್ಗ್ರೌಂಡ್ ಕೇಬಲಿಂಗ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದರು. ಕಾಮಗಾರಿ ಪೂರ್ಣಗೊಂಡ ಬಳಿಕ ಪಟ್ಟಣದಲ್ಲಿ ಮೇಲ್ಭಾಗದಲ್ಲಿ ಹಾದು ಹೋಗುತ್ತಿರುವ ಜೀವಂತ ವಿದ್ಯುತ್ ತಂತಿಗಳ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಹೇಳಿದರು.
ಉಳ್ಳಾಲದಲ್ಲಿ ಹಲವು ಸ್ಥಳಗಳಲ್ಲಿ ಹೈಟೆನ್ಷನ್ ಲೈನ್ಗಳು ಮನೆಗಳ ಮೇಲ್ಭಾಗ ಅಥವಾ ಮಳಿಗೆಗಳ ಮೇಲೆ ಹಾದು ಹೋಗುತ್ತಿದ್ದು, ನಾಗರಿಕರಿಗೆ ಅಪಾಯ ಉಂಟುಮಾಡುತ್ತಿರುವುದಾಗಿ ಅವರು ವಿವರಿಸಿದರು. ಕೆಲವೆಡೆ ವಿದ್ಯುತ್ ಕಂಬಗಳು ಮನೆಗಳ ಕಂಪೌಂಡ್ ಒಳಗೆ ಸ್ಥಾಪಿತವಾಗಿರುವ ಕಾರಣ, ಜಾಗದ ಕೊರತೆಯಿಂದ ಮೆಸ್ಕಾಂ ಅವುಗಳನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಅಂಡರ್ಗ್ರೌಂಡ್ ಕೇಬಲಿಂಗ್ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಖಾದರ್ ಹೇಳಿದರು.
ಈ ಕಾಮಗಾರಿಯನ್ನು ಕೆಪಿಟಿಸಿಎಲ್ ಮೂಲಕ ಕೈಗೆತ್ತಿಕೊಳ್ಳಲಾಗುತ್ತದೆ. ಉಳ್ಳಾಲಕ್ಕೆ ಮಂಜೂರಾದ ₹186 ಕೋಟಿಯೊಂದಿಗೆ ಮಂಗಳೂರು ನಗರದಲ್ಲಿ ಅಂಡರ್ಗ್ರೌಂಡ್ ಕೇಬಲಿಂಗ್ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ₹60 ಕೋಟಿ ಮಂಜೂರಾಗಿದೆ ಎಂದು ಅವರು ತಿಳಿಸಿದರು.
ಉಳ್ಳಾಲದಲ್ಲಿ ವಿದ್ಯುತ್ ಪೂರೈಕೆಯ ಗುಣಮಟ್ಟವನ್ನು ಸುಧಾರಿಸಲು ಹಾಗೂ ಮುಂದಿನ 30 ವರ್ಷಗಳ ಜನಸಂಖ್ಯೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಇರುವ 33 ಕೆವಿ ವಿದ್ಯುತ್ ಕೇಂದ್ರವನ್ನು ₹96 ಕೋಟಿ ವೆಚ್ಚದಲ್ಲಿ 110 ಕೆವಿ ಉಪಕೇಂದ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದರು.
ಸೇತುವೆ ನಿರ್ಮಾಣ ಯೋಜನೆಗಳು
ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೋಟೆಪುರದಿಂದ ಬೊಳಾರವರೆಗೆ ನೇತ್ರಾವತಿ ಸೇತುವೆಗೆ ಸಮಾಂತರವಾಗಿ ₹252 ಕೋಟಿ ವೆಚ್ಚದಲ್ಲಿ 1.5 ಕಿಮೀ ಉದ್ದದ ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಯೋಜನೆಗೆ ಅಗತ್ಯ ಎಲ್ಲಾ ಅನುಮತಿಗಳು ಲಭ್ಯವಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಈ ಸೇತುವೆಯನ್ನು ಅರಬ್ಬೀ ಸಮುದ್ರದ ನೋಟ ಸಿಗುವಂತೆ ವಿನ್ಯಾಸಗೊಳಿಸಲಾಗಿದ್ದು, ಸೇತುವೆಯ ಕೆಳಭಾಗದಲ್ಲಿ ಹೋಟೆಲ್, ಉಪಹಾರ ಗೃಹ ಹಾಗೂ ಉದ್ಯಾನವನಗಳಂತಹ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ವಾರಾಂತ್ಯಗಳಲ್ಲಿ ಸಂಜೆ 4ರಿಂದ 8ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸುವ ಪ್ರಸ್ತಾವವೂ ಇದೆ ಎಂದು ಅವರು ಹೇಳಿದರು.
ಇದೇ ವೇಳೆ ಸಜಿಪಾ–ತುಂಭೆ ನಡುವಿನ ₹62 ಕೋಟಿ ವೆಚ್ಚದ ಮತ್ತೊಂದು ಸೇತುವೆಗೂ ಅನುಮೋದನೆ ದೊರೆತಿದ್ದು, ಇದು ಅರ್ಕುಳ, ಮೇರಮಜಲು ಹಾಗೂ ತುಂಭೆ ಭಾಗದ ನಿವಾಸಿಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ಸಜಿಪಾ ನಿವಾಸಿಗಳು ತುಂಭೆ ತಲುಪಲು ಮೆಲ್ಕಾರ್ ಮತ್ತು ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕಾಗಿದೆ. ಈ ಯೋಜನೆ ಟೆಂಡರ್ ಹಂತದಲ್ಲಿದೆ.
ರಸ್ತೆ ದುರಸ್ತಿ ಕಾಮಗಾರಿ
ಮೂಡಿಪು–ಬಕ್ರಬೈಲು ರಸ್ತೆಯ ದುರವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, ₹3 ಕೋಟಿ ವೆಚ್ಚದಲ್ಲಿ ಒಳಚರಂಡಿ ಹಾಗೂ ರಸ್ತೆ ದುರಸ್ತಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಕನ್ನಡ ಭವನಕ್ಕೆ ಭೂಮಿ ಮಂಜೂರು
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಭವನ ನಿರ್ಮಾಣಕ್ಕಾಗಿ ವಾಮಂಜೂರು ಸಮೀಪದ ತಿರುವೈಲ್ ಗ್ರಾಮದ ಸರ್ವೇ ಸಂಖ್ಯೆ 61/3ರಲ್ಲಿ 50 ಸೆಂಟ್ ಭೂಮಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಈ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಲ್ಲಿ ಹಂಚಿಕೆ ಮಾಡಲಾಗಿದೆ.
ಅಬ್ಬಕ್ಕ ಹಾಗೂ ಬ್ಯಾರಿ ಭವನ
ಮಂಗಳೂರು ಕ್ಷೇತ್ರದಲ್ಲಿ ಅಬ್ಬಕ್ಕ ಭವನ ಮತ್ತು ಬ್ಯಾರಿ ಭವನಗಳ ನಿರ್ಮಾಣಕ್ಕೆ ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಿಸಲಾಗುವುದು. ಅಬ್ಬಕ್ಕ ಭವನಕ್ಕೆ ₹8 ಕೋಟಿ ಹಾಗೂ ಬ್ಯಾರಿ ಭವನಕ್ಕೆ ₹6 ಕೋಟಿ ಅನುದಾನ ಮಂಜೂರಾಗಿದೆ ಎಂದು ಖಾದರ್ ತಿಳಿಸಿದ್ದಾರೆ.
ವರದಿ: ಶಂಶೀರ್ ಬುಡೋಳಿ



