ಬೆಂಗಳೂರು : ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲೀಕರು 50 ರೂ. ಹೆಚ್ಚು ಕೊಡಬೇಕು. ಸರ್ಕಾರ ಕೂಡ 50 ರೂ. ಕೊಡಲಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಿದೆ. ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
50 ರೂ. ಹೆಚ್ಚುವರಿ ಕೊಡಲು ಮಾಲೀಕರ ವಿರೋಧ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಲೀಕರ ಎದುರೇ ಇದನ್ನ ನಿರ್ಧಾರ ಮಾಡಿದ್ದೇವೆ. ಹೇಳಿರೋದೊಂದು ಮಾಡಿರೋದೊಂದು ಅಲ್ಲ. ಮಾಲೀಕರ ಎದುರಿಗೆ ಎಲ್ಲವನ್ನು ಹೇಳಿದ್ದೇನೆ. ಝೂಮ್ ಮೀಟಿಂಗ್ನಲ್ಲಿ ಡಿಸಿ ಬಂದು ಹೇಳೋವರೆಗೂ ಒಪ್ಪಿರಲಿಲ್ಲ. ಡಿಸಿ ಹೇಳಿದ ಮೇಲೆ ಒಪ್ಪಿಕೊಂಡರು. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. 50 ರೂ. ಕಾರ್ಖಾನೆಗಳು ಕೊಡಬೇಕು, ಸರ್ಕಾರ 50 ರೂ. ಕೊಡಲಿದೆ ಎಂದರು.
10.25% ರಿಕವರಿಗೆ 3100+100= 3,200 ರೂ, 11.25% ರಿಕವರಿಗೆ 3,200+100=3,300 ರೂ. ಕೊಡಬೇಕು. ಬೆಳಗಾವಿ ಡಿಸಿ 3,200 ಹೇಳಿದ್ದರು, ಅದರ ಮೇಲೆ 100 ರೂ. ಜಾಸ್ತಿ ಕೊಡುತ್ತಿದ್ದೇವೆ. ಆದೇಶ ಈಗ ಜಾರಿ ಮಾಡುತ್ತೇವೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರೇ ರೈತರ ಬಳಿ ಹೋಗಿ ಅಲ್ಲೇ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.
ಕಬ್ಬು ಬೆಳೆಗೆ 3,500 ರೂ ಬೆಲೆ ನಿಗದಿ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ವಿಜಯಪುರದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಸಿಎಂ ಘೋಷಿಸಿರುವ 3,300 ರೂ. ಬೆಂಬಲ ಬೆಲೆಗೆ ಜಿಲ್ಲೆಯ ರೈತರು ಒಪ್ಪಿದ್ದಾರೆ. ಆದ್ರೆ ಅಧಿಕೃತ ಆದೇಶ ಪ್ರತಿ ಸಿಗುವವರೆಗೂ ಹೋರಾಟ ಮುಂದುವರೆಸಲು ರೈತರು ನಿರ್ಧಾರಿಸಿದ್ದಾರೆ.
ಈ ಕಾರಣ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು. ಇಂದು ಸಂಜೆವರೆಗೆ ಅಧಿಕೃತ ಆದೇಶ ತಲುಪಿಸಲು ರೈತರು ಗಡುವು ನೀಡಿದ್ದಾರೆ. ಅಧಿಕೃತ ಆದೇಶ ತಲುಪದಿದ್ದರೆ ನಾಳೆಯಿಂದ ಉಗ್ರ ಹೋರಾಟದ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.



