ಮುಂಬೈ: ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕ ಸಹರಾಶ್ರೀ ಸುಬ್ರತಾ ರಾಯ್ ಅವರು ನಿನ್ನೆ ರಾತ್ರಿ ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ಭಾನುವಾರ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮಂಗಳವಾರ ರಾತ್ರಿ ೧೦:೩೦ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ೭೫ ವರ್ಷ ವಯಸ್ಸಾಗಿತ್ತು ಎಂದು ಸಹಾರಾ ಗ್ರೂಪ್ ಪ್ರಕಟಿಸಿದೆ. ಅವರು ದೀರ್ಘಕಾಲದಿಂದ ಮೆಟಾಸ್ಟಾಟಿಕ್ ಕ್ಯಾನ್ಸರ್, ಅಧಿಕ ಬಿಪಿ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ಕಂಪನಿ ತಿಳಿಸಿದೆ.
ಸಹಾರಾ ಗ್ರೂಪ್ ೨೦೧೪ ರಿಂದ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಹಿಂದಿರುಗಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಸುಬ್ರತಾ ರಾಯ್ ಅವರು ಹಲವು ವರ್ಷ ಜೈಲಿನಲ್ಲಿದ್ದರು. ಸದ್ಯ ಅವರು ಪೆರೋಲ್ನಲ್ಲಿದ್ದರು ಎಂದು ಸಹಾರಾ ಗ್ರೂಪ್ ಪ್ರಕಟಿಸಿದೆ. ಸುಬ್ರತಾ ರಾಯ್ ಅವರ ಪರಂಪರೆ ಹಾಗೂ ಉದ್ಯಮದಲ್ಲಿ ಹೊಂದಿದ್ದ ಅವರ ದೃಷ್ಟಿಕೋನವನ್ನು ಮುಂದುವರೆಸಿಕೊಂಡು ಹೋಗಲಾಗವುದು ಎಂದು ಸಹಾರಾ ಗ್ರೂಪ್ ತಿಳಿಸಿದೆ. ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ಅವರಿಗೆ ಪತ್ನಿ ಸ್ವಪ್ನಾ ರಾಯ್ ಮತ್ತು ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಎಂಬ ಇಬ್ಬರು ಪುತ್ರರಿದ್ದಾರೆ.