ಚಾಮರಾಜನಗರ : 51 ವರ್ಷಗಳ ನಂತರ ಬಿಡುಗಡೆಗೊಂಡಿರುವ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ನಟಿಸಿರುವ ಚಾಮರಾಜನಗರದ ಕೃಷ್ಣ ಟಾಕೀಸ್ ಚಂದ್ರಣ್ಣ ( ಚಂದ್ರಶೇಖರ್) ರವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೃದಯ ಪೂರ್ವಕ ಗೌರವ ಸನ್ಮಾನವನ್ನು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ನೆರವೇರಿಸಿದರು.
ಚಂದ್ರಣ್ಣ ರವರಿಗೆ ಸನ್ಮಾನಿಸಿ ಮಾತನಾಡುತ್ತಾ ಸರಳರು, ಸಜ್ಜನರು ಆದ ಚಂದ್ರು ರವರು ಡಾ. ರಾಜಕುಮಾರ್ ರವರ ಒಡನಾಡಿಗಳು ಹಾಗೂ ಅವರ ಕುಟುಂಬದ ಗೌರವ ಸದಸ್ಯರು.ರಾಜಕುಮಾರ್ ಅವರ ಸ್ನೇಹದಿಂದ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಚಂದ್ರುರವರು ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾಕ್ಟರ್ ಪಾತ್ರವನ್ನು ವಹಿಸಿ ಜನ ಮೆಚ್ಚುಗೆ ಗಳಿಸಿದರು. ಸಂಪತ್ತಿಗೆ ಸವಾಲ್ ಚಿತ್ರ ಉತ್ತರ ಕರ್ನಾಟಕದ ಜನಪ್ರಿಯ ನಾಟಕವಾಗಿತ್ತು. ದುತ್ತರಗಿ ಅವರ ನಾಟಕವನ್ನು ಸಿನಿಮಾ ನಿರ್ಮಾಣ ಮಾಡಿ ಡಾ. ರಾಜಕುಮಾರ್ ಹಾಗೂ ಮಂಜುಳಾ ರವರು ನಟ ನಟಿಯರಾಗಿ ಅಪಾರ ಜನ ಮೆಚ್ಚುಗೆ ಗಳಿಸಿದ ಚಿತ್ರವಾಗಿತ್ತು. ಅಪಾರ ಹಣವನ್ನು ಈ ಚಿತ್ರ ಮಾಡಿತು. ಯಾರೇ ಕೂಗಾಡಲಿ ಊರೇ ಹೋರಾಡಲಿ ಹಾಡು ಸದಾ ಕಾಲ ನೆನಪಿನಲ್ಲಿ ಉಳಿದಿದೆ. 51 ವರ್ಷಗಳ ನಂತರ ಬಿಡುಗಡೆಗೊಂಡಿರುವ ಸಂಪತ್ತಿಗೆ ಸವಾಲ್ ಚಿತ್ರವನ್ನು ಸರ್ವರು ನೋಡಿ ಆನಂದಿಸಿ ಎಂದು ತಿಳಿಸುತ್ತಾ ಆ ಚಿತ್ರದಲ್ಲಿ ನಟಿಸಿ ಉಳಿದಿರುವ ಚಂದ್ರಣ್ಣ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರದ ಸಂಘ ಸಂಸ್ಥೆಗಳು ಗೌರವವನ್ನು ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರ ಪ್ರಸಾದ್ ರವರು ಸಂಪತ್ತಿಗೆ ಸವಾಲ್ ಕನ್ನಡ ಚಿತ್ರರಂಗದ ಜನಪ್ರಿಯ ಚಲನಚಿತ್ರ. ರಾಜಕುಮಾರ ಹಾಗೂ ಮಂಜುಳಾರವರು ನಟಿಸಿರುವ ಈ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಹುಟ್ಟುರಾದ ಗಾಜನೂರು ಸುತ್ತಮುತ್ತ ಚಿತ್ರೀಕರಣ ನಡೆಸಿ ಹುಟ್ಟೂರನ್ನು ಜನಪ್ರಿಯಗೊಳಿಸಿದ ರಾಜಕುಮಾರ ಅವರಿಗೆ ಹಾಗೂ ಅವರ ಸ್ನೇಹಿತರಾದ ಚಂದ್ರಣ್ಣನವರಿಗೆ ನಾವು ಸದಾ ಕಾಲ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಚಂದ್ರಣ್ಣ ಇಳಿ ವಯಸ್ಸಿನಲ್ಲಿ ನಮ್ಮೊಂದಿಗೆ ಇರುವುದು ಪುಣ್ಯವೆಂದು ತಿಳಿಸಿದರು.
ರಂಗ ಕಲಾವಿದ ಮಾಂಬಳ್ಳಿ ಅರುಣ್ ಕುಮಾರ್ ಮಾತನಾಡಿ ಚಂದ್ರಣ್ಣನವರ ಗೌರವ ನಮ್ಮೆಲ್ಲರ ಗೌರವವಾಗಿದೆ.ರಾಜಕುಮಾರ್ ಅವರ ಹಲವಾರು ಚಿತ್ರಗಳಲ್ಲಿ ನಟಿಸಿದ ಚಂದ್ರಣ್ಣನವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಬರಹಗಾರ ಎಸ್ ಲಕ್ಷ್ಮೀ ನರಸಿಂಹ ಮಾತನಾಡಿ ಸಂಪತ್ತಿಗೆ ಸವಾಲ್ ಚಿತ್ರದ ಎಲ್ಲಾ ಪಾತ್ರದವರ ನಟನೆ, ನಿರ್ದೇಶನ, ಹಾಡು , ಸಂಗೀತ, ಛಾಯಾಗ್ರಹಣ ಉತ್ತಮವಾಗಿದೆ ಎಂದರು.
ಸಮಾಜ ಸೇವಕ ಎಲ್ ಸುರೇಶ್ ಮಾತನಾಡಿ ಕೃಷ್ಣ ಟಾಕೀಸ್ ಚಂದ್ರಣ್ಣ ಎಂದರೆ ಬಹು ದೊಡ್ಡ ಹೆಸರು ಅಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುವ ಮೂಲಕ ಕೃಷ್ಣ ಟಾಕೀಸ್ ಜನಪ್ರಿಯಗೊಳಿಸಿದವರು. ಕೃಷ್ಣ ಚಿತ್ರಮಂದಿರದ ಮ್ಯಾನೇಜರ್ ಆಗಿ ಅಪಾರ ಸೇವೆ ಸಲ್ಲಿಸಿದರು ಎಂದರು.



