ಚಾಮರಾಜನಗರ: ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ , ಹೋರಾಟ, ಹೊಸ ಶಕ್ತಿಯನ್ನು ಹೆಚ್ಚಿಸುತ್ತದೆ . ಸಂಗೊಳ್ಳಿ ರಾಯಣ್ಣ ರಾಷ್ಟ್ರದ ನಂಬಿಕಸ್ಥ ವ್ಯಕ್ತಿತ್ವ ಹೊಂದಿದ ಶ್ರೇಷ್ಠ ವ್ಯಕ್ತಿ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಅಮಚವಾಡಿ ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಟ ಮತ್ತು ಸ್ಪೂರ್ತಿ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಿತ್ತೂರು ಸಂಸ್ಥಾನದ ಕಿತ್ತೂರು ರಾಣಿ ಚೆನ್ನಮ್ಮನವರ ಬಲಗೈ ಬಂಟರಾಗಿ ಕಿತ್ತೂರು ಸಂಸ್ಥಾನವನ್ನು ಬ್ರಿಟಿಷರಿಂದ ರಕ್ಷಿಸುವ ಧೀರ ಹೋರಾಟವನ್ನು ನಡೆಸಿದ ಸಂಸ್ಥಾನಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದ ಸಂಗೊಳ್ಳಿ ರಾಯಣ್ಣನವರು ಕೋಟ್ಯಾಂತರ ಯುವಕರಿಗೆ ಆದರ್ಶವಾಗಿದ್ದಾರೆ.
ಸಂಗೊಳ್ಳಿ ರಾಯಣ್ಣನವರ ಜೀವನ ಹೋರಾಟ ,ನಂಬಿಕೆ ,ನಿಷ್ಠೆ ,ಚಿಂತನೆ, ರಾಷ್ಟ್ರೀಯ ಮನೋಭಾವ, ದೇಶಭಕ್ತಿ ,ಧೈರ್ಯ, ಸಾಹಸ ಗುಣಗಳು ಯುವಕರಿಗೆ ಮಾದರಿಯಾಗಲಿ. ಸಂಗೊಳ್ಳಿ ರಾಯಣ್ಣನವರ ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಜೀವನವನ್ನು ರೂಪಿಸಿಕೊಳ್ಳಿ. ಸಮಯವನ್ನು ಸದಾ ಉಪಯೋಗ ಪಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಆದರ್ಶ ಪುರುಷರ ಇತಿಹಾಸ ತಿಳಿಯುವುದು ಅತ್ಯಂತ ಅವಶ್ಯಕ. ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿರುವ ಸಾವಿರಾರು ರಾಷ್ಟ್ರಭಕ್ತರನ್ನು ನೆನೆಯೋಣ ಎಂದು ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15 ಸಂಗೊಳ್ಳಿ ರಾಯಣ್ಣನವರ ಜನ್ಮದಿನವಾಗಿದೆ. ಭಾರತದ ಗಣರಾಜ್ಯ ದಿನ ಜನವರಿ 26ರಂದು ಅವರ ಸಂಸ್ಮರಣೆಯ ದಿನವಾಗಿರುವುದು ಭಾರತೀಯರಿಗೆ ಅವರನ್ನು ನೆನೆಯುವ ಹಾಗೂ ಸ್ಮರಿಸುವ ವಿಶೇಷ ದಿನವಾಗಿದೆ. ಯುವಕರಿಗೆ ಆದರ್ಶ ವ್ಯಕ್ತಿತ್ವ ರೂಪಿಸಿದ ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ ನಮಗೆ ಮತ್ತಷ್ಟು ನವಶಕ್ತಿಯನ್ನು ಉಂಟುಮಾಡುತ್ತದೆ ಎಂದರು.
ಮಮಚ್ ವಾಡಿ ಯುವ ಬಳಗದ ರವಿಕುಮಾರ್ ,ಗುರುರಾಜ್, ಶ್ರೀನಿವಾಸ್, ಪ್ರಸಾದ್, ನವೀನ್, ಚಂದನ್, ವಿನಯ್, ಗಣೇಶ ಮುಂತಾದವರು ಉಪಸ್ಥಿತರಿದ್ದರು.