ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜೆ.ಎಸ್.ಬೆಟ್ಟ ವಲಯ ಹಾಗು ಕುಂದಕೆರೆ ವಲಯದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಎರಡು ಚಿರತೆಗಳು ಕಾದಾಟದಲ್ಲಿ ಮೃತಪಟ್ಟಿದೆ. ಈ ಮೂಲಕ ಅಭಯಾರಣ್ಯದಲ್ಲಿ ಚಿರತೆಗಳ ಮರಣ ಮೃದಂಗ ಮುಂದುವರೆದಿದೆ.
ಜಿ.ಎಸ್.ಬೆಟ್ಟ ವಲಯದಲ್ಲಿ ಸಾವು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರ ಉಪ ವಿಭಾಗದ ಜೆ.ಎಸ್.ಬೆಟ್ಟ ವಲಯ ಹಂಗಳ ದಕ್ಷಿಣ ಶಾಖೆಯ ಕಲ್ಲಿಗೌಡನಹಳ್ಳಿ ಗಸ್ತಿನ ವ್ಯಾಪ್ತಿಗೆ ಒಳಪಡುವ ಮಂಗಲ ಗ್ರಾಮದ ಸರ್ವೆ-18 ರ ಜಮೀನಿನಲ್ಲಿ ಸುಮಾರು ಎರಡುವರೆ ವರ್ಷದ ಹೆಣ್ಣು ಚಿರತೆಯೊಂದು ಕಾದಾಟದಿಂದ ಸಾವನ್ನಪ್ಪಿದೆ. ಚಿರತೆ ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರೊಬ್ಬರು ಉಪ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ ಚಿರತೆಯೊಂದು ಸತ್ತು ಬಿದ್ದಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಚಿರತೆಯು ಕಾದಾಟದಿಂದ ಗಾಯಗೊಂಡು ಸತ್ತಿರಬಹುದೆಂದು ಮರಣೋತ್ತರ ಪರೀಕ್ಷೆಯಿಂದ ಅಂದಾಜಿಸಲಾಗಿದೆ. ನಂತರ ಚಿರತೆಯ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕುಂದುಕರೆ ವಲಯದಲ್ಲಿ ಸಾವು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪ ವಿಭಾಗದ ಕುಂದುಕರೆ ವಲಯದ ಚಿಕ್ಕಹಳ್ಳಿ ಗಸ್ತಿನ ಹಾಲಹಳ್ಳಿ ಕೆರೆಯ ಬಳಿ 03 ವರ್ಷದ ಗಂಡು ಚಿರತೆ ಕಾದಾಟದಿಂದ ಮೃತಪಟ್ಟಿದೆ. ಚಿರತೆಯ ಮೈ ಮೇಲೆ ಮತ್ತೊಂದು ಚಿರತೆಯ ಉಗುರಿನ ಗುರುತು ಹಾಗೂ ಇತರೆ ಗಾಯದ ಗುರುತುಗಳು ಕಂಡು ಬಂದ ಹಿನ್ನೆಲೆ ಚಿರತೆ ಕಾಟಾಟದಲ್ಲಿ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ವಲಯ ಅರಣ್ಯಾಧಿಕಾರಿ ಡಿ.ಶ್ರೀನಿವಾಸ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮರಣೋತ್ಸರ ಪರೀಕ್ಷೆ ನಡೆಸಿದರು.
ಅರಣ್ಯ ಇಲಾಖೆ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಎರಡು ಚಿರತೆಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಚಿರತೆಗಳ ಕಳೆಬರವನ್ನು ಸುಡಲಾಯಿತು. ಈ ಸಂದರ್ಭದಲ್ಲಿ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಇತರರು ಹಾಜರಿದ್ದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಜ ಜೆ.ಎಸ್.ಬೆಟ್ಟ ವಲಯ ಮಂಗಲ ಗ್ರಾಮದ ಸರ್ವೆ-18 ರ ಜಮೀನಿನಲ್ಲಿ ಸಾವನ್ನಪ್ಪಿರುವ ಹೆಣ್ಣು ಚಿರತೆ