ಚರಂಡಿ ಅವ್ಯವಸ್ಥೆ : ಕಣ್ಮುಚ್ಚಿ ಕುಳಿತ ನಗರ ಸಭೆ
ಹುಣಸೂರು : ನಗರದ ಕೇಂಬ್ರಿಡ್ಜ್ ಸ್ಕೂಲ್ ಪಕ್ಕದಲ್ಲಿ ಚರಂಡಿ ಅವ್ಯವಸ್ಥೆಯಿಂದ ನೀರು ಹರಿದು ಹೋಗದೆ ನಿಂತಲ್ಲೇ ನಿಂತಿದ್ದರೂ ಕೂಡ ನಗರಸಭೆ ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಸತ್ಯ ಎಮ್.ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಹುಣಸೂರು ನಗರದ ವಾರ್ಡ್ ನಂಬರ್ 28ರಲ್ಲಿರುವ ಕೇಂಬ್ರಿಡ್ಜ್ ಶಾಲೆಗೆ ಹೋಗುವ ರಸ್ತೆಯಲ್ಲಿ ರಾಮು ಅವರ ಅಂಗಡಿ ಪಕ್ಕದಲ್ಲಿಯೇ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಕೊಳಚೆ ನೀರು ಸರಿಯಾಗಿ ಹರಿದು ಹೋಗದೆ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಶೇಖರಣೆಗೊಂಡಿದೆ ಎಂದು ದೂರಿದ್ದಾರೆ.
ಈ ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಅಕ್ಕ ಪಕ್ಕದ ನಿವಾಸಿಗಳಿಗೆ ವಾಸ ಮಾಡಲು ಬಹಳ ತೊಂದರೆಯಾಗಿದೆ. ಅಲ್ಲದೆ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಪಕ್ಕದಲ್ಲಿಯೇ ಶಾಲೆಯು ಸಹ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಶುದ್ಧ ಕುಡಿಯುವ ನೀರಿನ ಪೈಪುಗಳು ಸಹ ಇಲ್ಲಿ ಪಕ್ಕದಲ್ಲಿ ಹಾದು ಹೋಗಿರುವುದರಿಂದ ನಿಂತಲ್ಲಿಯೇ ನಿಂತಿರುವ ಕೊಳಚೆ ನೀರು ಎಲ್ಲಿ ಕುಡಿಯುವ ನೀರಿಗೆ ಮಿಶ್ರಣವಾಗುತ್ತದೆಯೋ ಎಂಬ ಭಯದಲ್ಲಿಯೇ ಇಲ್ಲಿನ ನಿವಾಸಿಗಳು ಕಾಲ ಕಳೆಯುತ್ತಿದ್ದಾರೆ. ವಾರ್ಡಿನ ನಗರಸಭಾ ಸದಸ್ಯರು ಕಂಡರೂ ಸಹ ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ.
ಕೂಡಲೇ ನಗರಸಭೆಯವರು ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಒಂದು ವಾರದ ಒಳಗಾಗಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಿರ್ಲಕ್ಷ್ಯತೆಯನ್ನು ಖಂಡಿಸಿ ಸದರಿ ವಾರ್ಡಿನ ನಿವಾಸಿಗಳು ಹಾಗೂ ಸತ್ಯ ಎಂ ಎ ಎಸ್ ಫೌಂಡೇಶನ್ ವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸತ್ಯಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಚರಂಡಿ ಅವ್ಯವಸ್ಥೆಯಿಂದ ನೀರು ಹರಿದು ಹೋಗದೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಹತ್ತಿರದಲ್ಲಿಯೇ ಶಾಲೆಗಳು ಇದ್ದು ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಸಾಧ್ಯತೆ ಇದೆ. ನಗರ ಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು
-ಸತ್ಯ ಎಮ್.ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ



