ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಮಾರ್ಚ್ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಹಾಗೂ ಕೆನಡಾ ಓಂಟಾರಿಯೊ ಸರ್ಕಾರದ ಆರ್ಥಿಕ ತಜ್ಞ ಪ್ರಾಂಜಲ್ ಘಾಟೆ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಸ್ವಚ್ಛ ಮಂಗಳೂರು ಸಂಯೋಜಕ ರಂಜನ್ ಬೆಳ್ಳರ್ಪಾಡಿ ಅವರು ಉಪಸ್ಥಿತರಿದ್ಧರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಾಂಜಲ್ ಘಾಟೆ, “ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡುವ ಅನುಭವದಿಂದ ಸ್ವಚ್ಛತೆಯ ಮಹತ್ವವನ್ನು ನಾನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇನೆ. ರಾಮಕೃಷ್ಣ ಮಿಷನ್ನ ನೇತೃತ್ವದಲ್ಲಿ ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿರುವ ಸ್ವಯಂಸೇವಕರು ಹಾಗೂ ಮಂಗಳೂರು ನಾಗರಿಕರ ಸಮರ್ಪಿತ ಪ್ರಯತ್ನವನ್ನು ನಾನು ಹೃತ್ಪೂರ್ವಕವಾಗಿ ಮೆಚ್ಚುತ್ತೇನೆ” ಎಂದು ಹೇಳಿದರು.
ಶ್ರಮದಾನ ಚಟುವಟಿಕೆಗಳ ಭಾಗವಾಗಿ, ಬಾಲಕೃಷ್ಣ ಭಟ್, ಅನಿರುದ್ಧ ನಾಯಕ್, ಪ್ರಕಾಶ್, ರಾಮಚಂದ್ರ ಭಟ್, ಗಂಗಾಧರ ಶಾಸ್ತ್ರಿ, ಪದ್ಮನಾಭ ಸಾಲಿಯನ್, ಅವಿನಾಶ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುಕುಮಾರ್ ಸಾಲಿಯನ್ ಹಾಗೂ ಇತರ ಹಿರಿಯ ಸ್ವಯಂಸೇವಕರು ಕದ್ರಿ ದೇವಸ್ಥಾನದ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕಸವನ್ನು ತೆರವುಗೊಳಿಸುವುದರ ಜೊತೆಗೆ ಅಸಮರ್ಪಕ ಬ್ಯಾರಿಕೇಡ್ಗಳು ಮತ್ತು ಅನಗತ್ಯ ಫಲಕಗಳನ್ನು ತೆರವುಗೊಳಿಸಿ, ಪಾರ್ಕಿಂಗ್ ಸಿಬ್ಬಂದಿಗೆ ಜಾಗೃತಿ ಮೂಡಿಸಿದರು. ಅಲ್ಲದೆ, ಭೇಟಿ ನೀಡು ಭಕ್ತರು ಲಭ್ಯವಿರುವ ಕಸದ ಬುಟ್ಟಿಗಳನ್ನು ಸರಿಯಾಗಿ ಬಳಸುವಂತೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರೇರೇಪಿಸಿದರು.
ವರದಿ: ಶಂಶೀರ್ ಬುಡೋಳಿ



