ಮೈಸೂರು: ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಲವತ್ತು ವರ್ಷಗಳ ಕಳಂಕ ರಹಿತ ರಾಜಕೀಯ ಎನ್ನುತ್ತೀರಲ್ಲಾ, ತಾವು ತಪ್ಪು ಮಾಡದಿದ್ದರೆ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯನ್ನೇಕೆ ದುರ್ಬಲಗೊಳಿಸುತ್ತಿದ್ದಿರಿ. ಕೆಂಪಣ್ಣ ಆಯೋಗದ ವರದಿಯನ್ನೇಕೆ ಮುಚ್ಚಿಟ್ಟಿದ್ದೀರಿ. ಎಂಡಿಎ ಪ್ರಕರಣದಲ್ಲಿ ದಲಿತರಿಗೆ ಅನ್ಯಾಯ ಮಾಡಲಿಲ್ಲವೇ ನೋಟಿಫಿಕೇಷನ್ ಆದ ಜಮೀನನ್ನು ಹೇಗೆ ಖರೀದಿಸಿದಿರಿ.
ಆಗ ನೀವೇ ಉಸ್ತುವಾರಿ ಸಚಿವರು ಮತ್ತು ಉಪ ಮುಖ್ಯಮಂತ್ರಿ. ಆಗ ಯಾವುದೇ ಪ್ರಭಾವ ಬೀರಲಿಲ್ಲವೇ ಎಂದು ಪ್ರಶ್ನಿಸಿದರು. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಿಂದ ಎಂಡಿಎ ಪ್ರಕರಣದವರೆಗೆ ಅನೇಕ ತಪ್ಪುಗಳಾಗಿದೆ. ಆ. ೩ ರಿಂದ ಆರಂಭವಾದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಜನಾಂದೋಲನವಾಗಿ ರೂಪುಗೊಂಡಿದೆ. ಆಡಳಿತ ಪಕ್ಷದ ವಿರುದ್ಧವಾಗಿ ನಡೆಯುತ್ತಿರುವ ಜನ ಬೆಂಬಲ ನೋಡಿ ಮುಖ್ಯಮಂತ್ರಿಗಳು, ಸಚಿವರು, ಕಾಂಗ್ರೆಸ್ ಹೈಕಮಾಂಡ್ ಗಾಬರಿಯಾಗಿದೆ. ಗಾಬರಿ ಬಿದ್ದು ಈಗ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ೧೯೭ ಕೋಟಿ ಹಣ ಅನೇಕ ಖಾತೆಗಳಿಗೆ ವರ್ಗಾವಣೆಯಾಗಿದೆ. ಇಂತಹ ಕಾಂಗ್ರೆಸ್ ಲೂಟಿ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಎಂಡಿಎ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಆರಂಭವಾಗಿದೆ. ಸಿಎಂ ೪೦ ವರ್ಷದ ರಾಜಕೀಯ ಜೀವನವದಲ್ಲಿ ಕಳಂಕ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಾನು ನಿಮ್ಮನ್ನು ಸಾರ್ವಜನಿಕವಾಗಿ ಪ್ರಶ್ನೆ ಕೇಳುತ್ತಿದ್ದೇನೆ. ಕಳಂಕ ಅಲ್ಲವೇ ಇಲ್ಲವೇ ಎಂಬುದನ್ನು ಹೇಳಬೇಕು. ಲೂಟಿ ಕಪ್ಪು ಚುಕ್ಕೆ ಅಲ್ಲವೇ ಇಂಬುದನ್ನು ಹೇಳಬೇಕು ಎಂದು ಅವರು ಸವಾಲು ಹಾಕಿದರು.
೬೨ ಕೋಟಿ ಪರಿಹಾರ ಕೇಳುವ ನೈತಿಕತೆ ಇದ್ದರೆ ಮೈಸೂರಿನ ಇತರೆ ರೈತರಿಗೂ ನೀವು ಅಷ್ಟೇ ಪರಿಹಾರ ಕೊಡಬೇಕಾಗುತ್ತದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೀರಿ. ತಪ್ಪು ಅಭಿಪ್ರಾಯ ಬರುವಂತೆ ಹೇಳಿಕೆ ನೀಡುತ್ತಿದ್ದೀರಿ ಎಂದು ಅವರು ಟೀಕಿಸಿದರು.
ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದೀರಿ. ಕಾನೂನು ತಜ್ಞರು ಎಂದು ಹೇಳಿಕೊಳ್ಳವ ನಿಮಗೆ ಸಕ್ಷನ್ ಆರ್.ಪಿ ೧೨೫ಎ ಪ್ರಕಾರ ಶಿಕ್ಷಾರ್ಹ ಅಪರಾಧ. ೬ ತಿಂಗಳ ಜೈಲು ಶಿಕ್ಷೆ ಆಗುತ್ತದೆ ಎಂಬುದು ಗೊತ್ತಿಲ್ಲವೇ. ನೀವು ತನಿಖೆ ನಡೆಸಲು ದೇಸಾಯಿ ಆಯೋಗ ರಚಿಸಿದ್ದೀರಿ. ಅದನ್ನು ಬಿಟ್ಟು ನೈತಿಕವಾಗಿ ರಾಜೀನಾಮೆ ಕೊಟ್ಟು ತನಿಖೆ ಸಹಕರಿಸಿ. ಬಸವನ ಗೌಡ ದದ್ದಲ್, ಮಾಜಿ ಸಚಿವ ನಾಗೇಂದ್ರೆಗೆ ಕ್ಲೀನ್ ಚಿಟ್ಕೊಟ್ಟಿದ್ದಿರಿ. ಆ ಮೇಲೆ ಏನಾಯಿತು. ಆದ್ದರಿಂದ ಈ ಪ್ರಕರಣವನ್ನೂ ಕೂಡಲೇ ಸಿಬಿಐ ಕೊಡಬೇಕು ಎಂದು ಆಗ್ರಹಿಸಿದರು.