ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡುತ್ತಲೇ ಮಾಜಿ ಸಚಿವ BC ಪಾಟೀಲ್ ಭಾವುಕರಾಗಿದ್ದು, ಸಿದ್ದು ಜೊತೆಗಿನ ಒಡನಾಟದ ಕುರಿತು ಭಾವುಕ ಪೋಸ್ಟ್ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಮಾಂಡ್ ನಿರ್ದೇಶನದ ಮೇರೆಗೆ ಇಂದು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇಂದು ಮಧ್ಯಾಹ್ನ ಲೋಕಭವನಕ್ಕೆ ಆಗಮಿಸಿದ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಲ್ಲಿಸಿದರು. ಈ ಮೂಲಕ ಕಳೆದ ಮೂರು ವರ್ಷಗಳ ಅವರ ಆಡಳಿತ ಅಂತ್ಯಗೊಂಡಿತು.
ಈ ಬೆಳವಣಿಗೆ ಬೆನ್ನಲ್ಲೇ ಎಕ್ಸ್ ನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಸಿದ್ದರಾಮಯ್ಯ ಕುರಿತು ಭಾವುಕ ಪೋಸ್ಟ್ ಮಾಡಿದ್ದಾರೆ. ‘ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ’ ಎಂದು ಹೇಳಿದ್ದಾರೆ.
‘ಸಿಎಂ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ಮತ್ತು ವಿದಾಯ ಎಲ್ಲೋ ಒಂದು ಕಡೆ ನನಗೆ ಗೊತ್ತಿಲ್ಲದೆ ನೋವನ್ನ ಕೊಡ್ತಾ ಇದೆ. ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು ಆದರೆ ಅವರೊಂದಿಗೆ ಒಡನಾಟ ಮರೆಯುವಂತದ್ದಲ್ಲ ನಾನು ಅವರನ್ನು ಪೊಲೀಸ್ ಅಧಿಕಾರಿಯಾಗಿ ನೋಡಿದ್ದೇನೆ. 2004 ರಿಂದ ಅವರೊಂದಿಗೆ ಶಾಸಕನಾಗಿ ಕೂಡ ಅವರೊಂದಿಗಿದ್ದೆ’ ಎಂದಿದ್ದಾರೆ.
ಅಂತೆಯೇ ‘ನನಗೆ ನೋವುಂಟಾಗಿದೆ. ನನಗೆ ಅವರ ಬಗ್ಗೆ ಇದ್ದಂತಹ ಗೌರವ ಮತ್ತು ಪ್ರೀತಿ. ನನ್ನ ಮನೆಗೆ ಎಷ್ಟು ಬಾರಿ ಬಂದಿದ್ದಾರೋ ಗೊತ್ತಿಲ್ಲ ಕರೆದಾಗಲೆಲ್ಲ ಬರ್ತಾ ಇದ್ರು ಪ್ರೀತಿ ಹಂಚಿಕೊಳ್ತಾ ಇದ್ರು ಎಂದಿದ್ದಾರೆ.
ಅವರು ಮುಖ್ಯಮಂತ್ರಿಯಾದ ಮೇಲೆ 2023ರ ನಂತರ ಹೋಗಿ ಭೇಟಿಯಾಗಲಿಲ್ಲ. ಒಂದು ಬಾರಿ ದೆಹಲಿಯಲ್ಲಿ ಭೇಟಿಯಾದಾಗ ನನ್ನ ಅತ್ಯಂತ ಪ್ರೀತಿ ವಿಶ್ವಾಸದಿಂದ ಮಾತನಾಡಿ ನನಗೆ ಬೆನ್ನು ತಟ್ಟಿದರು. ಸಿದ್ದರಾಮಯ್ಯ ಒಬ್ಬ ಇತಿಹಾಸಕಾರ ಅರ್ಥಶಾಸ್ತ್ರಜ್ಞ ಚಾಣಾಕ್ಷ ಹೃದಯವಂತ ನೇರ ನಿಷ್ಠುರನುಡಿಗೆ ಹೆಸರಾದವರು ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಭಗವಂತ ಅವರಿಗೆ ಆಯುರಾರೋಗ್ಯ ಭಾಗ್ಯವನ್ನು ಕೊಡಲಿ ಅವರು ಆರೋಗ್ಯದ ಬಗ್ಗೆ ಹೆಚ್ಚುಗಮನವನ್ನು ನೀಡಿ ಯುವಕರಿಗೆ ಮಾರ್ಗದರ್ಶನ ನೀಡಲಿ ಎಂದು ಬಿ.ಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.



