ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ೩೭೧ ಕೋಟಿ ರೂ. ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಚಂದ್ರಬಾಬು ನಾಯ್ಡು ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಆಗಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ನಡೆಸಿದ ತನಿಖೆಯ ಮೇರೆಗೆ ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ ೩೧, ೨೦೨೩ರಂದು ಮಧ್ಯಂತರ ಜಾಮೀನು ಪಡೆಯುವ ಮೊದಲು ಅವರು ೫೦ ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು.
ಕೌಶಲ್ಯ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನಾಯ್ಡು ಅವರನ್ನು ರಾಜಮಹೇಂದ್ರವರಂ ಜೈಲಿನಲ್ಲಿ ಇರಿಸಲಾಗಿತ್ತು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಾಯ್ಡುಗೆ ಜಾಮೀನು ಅಗತ್ಯವಿದೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ವೈದ್ಯಕೀಯ ಆಧಾರದ ಮೇಲೆ ಅವರು ಅಕ್ಟೋಬರ್ ೩೧, ೨೦೨೩ರಂದು ಮಧ್ಯಂತರ ಜಾಮೀನು ಪಡೆದಿದ್ದರು.
ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ನವೆಂಬರ್ ೨೦ ರಂದು ಆಂಧ್ರಪ್ರದೇಶ ಹೈಕೋರ್ಟ್ ನಿಯಮಿತ ಜಾಮೀನು ನೀಡಿತು. ಅದಾದ ಒಂದು ವಾರದ ನಂತರ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಅವರಿಗೆ ಅನುಮತಿ ನೀಡಿತ್ತು. ಆ ಪ್ರಕರಣದಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಚಂದ್ರಬಾಬು ನಾಯ್ಡು ಅವರ ಪಾತ್ರವನ್ನು ದೃಢೀಕರಿಸುವ ಯಾವುದೇ ಪುರಾವೆಗಳನ್ನು ತನಿಖಾಧಿಕಾರಿಗಳು ಇಲ್ಲಿಯವರೆಗೆ ಕಂಡುಕೊಂಡಿಲ್ಲ. ಹೀಗಾಗಿ, ಇಡಿ ಕ್ಲೀನ್ ಚಿಟ್ ನೀಡಿದೆ.