ರಾಮನಗರ: ತಮ್ಮ ಜೀವನಾನುಭವಗಳ ಮೂಲಕ ಇಂದಿನ ಸಮಾಜಕ್ಕೆ ಉತ್ತಮ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು ಹಿರಿಯರಾದ ತಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಅವರು ಅಭಿಪ್ರಾಯಪಟ್ಟರು.
ಅವರು ಅ. ೧ರ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರನ್ನು ದೇವರ ಸ್ಥಾನದಲ್ಲಿ ಇರಸಿ ಪೂಜಿಸಬೇಕು, ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮಾನವೀಯತೆಯ ಮೌಲ್ಯಗಳು ಕಡಿಮೆಯಾಗುತ್ತಿವೆ, ವಯಸ್ಸಾದ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ, ಹಿರಿಯ ನಾಗರಿಕರ ಮೇಲೆ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮಾನವೀಯ ಮೌಲ್ಯಗಳ ಕೊರತೆಯೇ ಕಾರಣ ಆದ್ದರಿಂದ ಆಧುನಿಕತೆಯ ಅಭಿವೃದ್ಧಿಗೆ ತಕ್ಕಂತೆ ಮಾನವೀಯ ಮೌಲ್ಯಗಳ ವೃದ್ದಿಯೂ ಅವಶ್ಯಕವಾಗಿದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲಾಗುತ್ತಿದೆ, ಅದರಂತೆಯೇ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರವೃತ್ತಿಯನ್ನು ಹೆಚ್ಚಾಗಬೇಕು, ಅದು ಏನಿದ್ದರೂ ಮನೆಯಲ್ಲಿನ ಹಿರಿಯ ನಾಗರಿಕರ ಅನುಭವದ ಮಾರ್ಗದರ್ಶನದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ನೈತಿಕ ಶಿಕ್ಷಣದ ಕೊರತೆಯು ಎದ್ದು ಕಾಣಿಸುತ್ತಿದೆ ಅದನ್ನು ಅನುಭವದ ಮುಖೇನ ತಿಳಿಸುವುದರಿಂದ ಹೆಚ್ಚು ಅರ್ಥ ಮಾಡಿಸಬಹುದು, ಅದು ಹಿರಿಯರಾದ ನಿಮ್ಮಿಂದ ಮಾತ್ರ ಸಾಧ್ಯ. ಇಂದಿನ ಪೀಳಿಗೆಯ ಮಕ್ಕಳಿಗೂ ಹಾಗೂ ಹಿರಿಯ ನಾಗರಿಕರಿಗೂ ಅಂತರ ಹೆಚ್ಚುತ್ತಿದ್ದು, ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯವಾಗಿದೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಅರ್ಕಾವತಿ ನದಿಯ ಎಡ ಮತ್ತು ಬಲ ದಂಡೆಯ ಸುಮಾರು ಒಂದುವರೆ ಕಿ.ಮೀ ವ್ಯಾಪ್ತಿಯಲ್ಲಿ ೧೫೭ ಕೋಟಿ ರೂ.ಗಳ ವೆಚ್ಚದಲ್ಲಿ ವಾಕಿಂಗ್ ಪಾರ್ಕ್ ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲಾ ಕ್ರೀಡಾಂಗಣವನ್ನು ೨೦ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ, ಡ್ರೆಸ್ಸಿಂಗ್ ರೂಮ್, ವ್ಯಾಯಾಮ ಶಾಲೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಎಂಟು ಸಾವಿರ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಜಮೀನನ್ನು ಗುರುತಿಸಲಾಗಿದೆ, ಇದರಿಂದ ಮನೆ ಇಲ್ಲದ ಬಡ ಜನರಿಗೆ ಮನೆಯನ್ನು ಒದಗಿಸಲಾಗುತ್ತದೆ, ಜಿಲ್ಲೆಯಲ್ಲಿ ಕನ್ನಡ ಭವನ ಹಾಗೂ ಹಿರಿಯರಿಗಾಗಿ ಒಂದು ಸಮುದಾಯ ಭವನ ನಿರ್ಮಿಸಲು ಹಲವು ಮನವಿಗಳು ಬಂದಿದ್ದವು ಅವುಗಳ ನಿರ್ಮಾಣಕ್ಕೆ ನಿರ್ದಿಷ್ಟವಾದ ಜಮೀನನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎನ್. ನಟರಾಜ್ ಗಾಣಕಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ, ಪಿಂಚಣಿ ಯೋಜನೆ, ಆರೋಗ್ಯ ಶಿಬಿರಗಳು, ಇನ್ನೂ ಅನೇಕ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ನೀಡುತ್ತಿದೆ ಅದನ್ನು ಹಿರಿಯ ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.