ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ 36 ವರ್ಷಗಳ ಬಳಿಕ ವಾಪಸ್ ಆಗಿದ್ದು, ಕಾದು ಕುಳಿತ ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ತುಳುನಾಡಿನ ಕಾರಣಿಕ ಮಂತ್ರದೇವತೆ ದೈವದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಮಗ ಮನೆಗೆ ಬಂದಿದ್ದರಿಂದ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಮೂಡುಬಿದಿರೆಯಿರುವೈಲು ಗ್ರಾಮದ ನಿವಾಸಿ ಚಂದ್ರಶೇಖರ್ ಅವರು 36 ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಮುಂಬೈಗೆ ತೆರಳಿದ್ದರು. ಆರಂಭದ ಏಳು ತಿಂಗಳು ಮಾತ್ರ ತಾಯಿಯೊಂದಿಗೆ ಪತ್ರದ ಮುಖಾಂತರ ಸಂಪರ್ಕದಲ್ಲಿದ್ದ ಅವರು, ಆ ಬಳಿಕ ಏಕಾಏಕಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು, ಬಂಧುಬಳಗ ಎಲ್ಲರೂ ನಿರೀಕ್ಷೆಯಲ್ಲಿ ಉಳಿದಿದ್ದರು. ಹಲವಾರು ಕಡೆ ಹುಡುಕಾಟ ನಡೆದಿದ್ದರೂ ಫಲ ಸಿಗಲಿಲ್ಲ.
ಚಂದ್ರಶೇಖರ್ ಅವರು ಮುಂಬೈನಲ್ಲಿ ತೀವ್ರ ಮಾನಸಿಕ ಆಘಾತಕ್ಕೊಳಗಾಗಿ, ಆಶ್ರಯವಿಲ್ಲದವರಂತೆ ದಾರಿ ತಪ್ಪಿ, ಮಂದಿರಗಳಲ್ಲಿ, ಬೀದಿಗಳಲ್ಲಿ ತಿರುಗಾಡುತ್ತ 10 ವರ್ಷ ಕಳೆದಿದ್ದರು. ನಂತರ, ಬಾಲು ಕಾಂಬ್ಳೆ ಎಂಬ ಮರಾಠಿ ವ್ಯಕ್ತಿ ಚಂದ್ರಶೇಖರ್ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿದರು. ಅವರು ನಿಧಾನವಾಗಿ ನಿಗದಿತ ಜೀವನಕ್ಕೆ ಮರಳಿದರು. ತಮ್ಮ ಹೋಟೆಲ್ನಲ್ಲಿ ಉದ್ಯೋಗ ನೀಡಿದ ಈ ಮರಾಠಿ ಕುಟುಂಬ ಅವರ ಜೀವನದಲ್ಲಿ ಆಪ್ತವಾಗಿದ್ದು, ಚಂದ್ರಶೇಖರ್ ಅವರಿಗೆ ಹೊಸ ಜೀವ ನೀಡಿದಂತಾಯಿತು.
ಇತ್ತ ಗ್ರಾಮದಲ್ಲಿ ಇಡೀ ಕುಟುಂಬ, ವಿಶೇಷವಾಗಿ ತಾಯಿ, ತಮ್ಮ ಮಗನಿಗಾಗಿ ದೇವರ ಮೊರೆ ಹೊತ್ತಿದ್ದರು. ಕುಟುಂಬವು ನಿಯಮಿತವಾಗಿ ಗ್ರಾಮದ ಮಂತ್ರದೇವತೆಯ ಆರಾಧನೆ ಮಾಡುತ್ತಿದ್ದಿತು. ಕೆಲವು ತಿಂಗಳ ಹಿಂದೆ ಮಂತ್ರದೇವತೆ ದೈವ ಅಭಯ ನೀಡಿತ್ತು. ಮಗ ಬದುಕಿದ್ದು, ಮುಂದೆ ನಡೆಯುವ ದರ್ಶನದಲ್ಲಿ ದೈವದ ಸೇವೆ ಹಿರಿಯ ಮಗನಿಂದಲೇ ನಡೆಯಬೇಕೆಂದು ಎಂದು ದೈವ ನುಡಿದಿತ್ತು. ಆ ಬಳಿಕ ನಡೆದದ್ದೆಲ್ಲಾ ಪವಾಡ.
ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮುಂಬೈಯಲ್ಲಿ ನೆಲೆಸಿದ್ದ ಊರ ವ್ಯಕ್ತಿಯೊಬ್ಬರಿಂದ ಚಂದ್ರಶೇಖರ್ ಬಗ್ಗೆ ಸುಳಿವು ಸಿಕ್ಕಿದೆ. ಆ ಬಳಿಕ ಚಂದ್ರಶೇಖರ್ ಸಂಪರ್ಕಿಸಲು ಊರವರು, ಮುಂಬೈಯಲ್ಲಿ ನೆಲೆಸಿರುವ ಪರಿಚಯಸ್ಥರ ಪ್ರಯತ್ನಿಸಿದ್ದಾರೆ. ಕೊನೆಗೆ ಆಶ್ರಯ ನೀಡಿದ ಕುಟುಂಬದವರ ದೂರವಾಣಿ ಸಂಖ್ಯೆ ಲಭ್ಯವಾಗಿದೆ. ಕೊನೆಗೂ ಮೇ.29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮನೆಗೆ ಬಂದ ಬಳಿಕ ಮಾನಸಿಕ ಅನಾರೋಗ್ಯದಿಂದ ಭಾಗಶಃ ಗುಣಮುಖರಾಗಿದ್ದಾರೆ. ಮಂತ್ರದೇವತೆ ದೈವದ ಕಾರಣಿಕವನ್ನು ಚಂದ್ರಶೇಖರ್ ಕುಟುಂಬ ಕೊಂಡಾಡಿದೆ. ಹಾಗೆಯೇ ಮನೆ ಮಗನಂತೆ ಸಾಕಿದ ಬಾಲು ಕಾಂಬ್ಳೆ ಕುಟುಂಬವನ್ನು ಕೊಂಡಾಡಿದ್ದಾರೆ.