ಬೆಂಗಳೂರು: ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ ಆರೋಪ ಎದುರಿಸುತ್ತಿದ್ದ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ ಮತ್ತು ಮ್ಯಾನೇಜರ್ ಎಸ್. ಸುಧೀಂದ್ರ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಸೌಂದರ್ಯ ಜಗದೀಶ್ ಅವರ ವ್ಯವಹಾರದ ಪಾಲು ದಾರರಾದ ವಿ.ಎಸ್. ಸುರೇಶ್, ಎಸ್.ಪಿ.ಹೊಂಬಣ್ಣ ಮತ್ತು ಎಸ್. ಸುಧೀಂದ್ರ ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪುನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
ಮೃತರು ಬರೆದಿರುವ ಪತ್ರದಲ್ಲಿ ಎಲ್ಲೂ ಸಹ ಆತ್ಮಹತ್ಯೆಗೆ ಪ್ರಚೋದನೆ ಅಥವಾ ಕುಮ್ಮಕ್ಕು ನೀಡಿದ್ದಾರೆಂಬ ಉಲ್ಲೇಖವಿಲ್ಲ ಎಂಬ ಅರ್ಜಿದಾರರ ವಾದ ಮಾನ್ಯ ಮಾಡಿರುವ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ. ಅಲ್ಲದೆ, ಈ ಆದೇಶದಲ್ಲಿನ ಅಭಿಪ್ರಾಯಗಳು ಆರೋಪಿಗಳು ಮತ್ತು ಮೃತರ ನಡುವಿನ ಬೇರೆ ವಿವಾದಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ತಿಂಗಳ ಬಳಿಕ ಡೆತ್ನೋಟ್ ಆಧರಿಸಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಡೆತ್ನೋಟ್ನಲ್ಲಿ ಎಲ್ಲೂ ಆತ್ಮಹತ್ಯೆಗೆ ಆರೋಪಿಗಳೇ ಪ್ರಚೋದನೆ ನೀಡಿದ್ದಾರೆಂಬ ಆರೋಪವಿಲ್ಲ. ಹಾಗಾಗಿ ಪ್ರಕರಣವನ್ನು ರದ್ದು ಗೊಳಿಸಬೇಕು ಎಂದು ಕೋರಿದರು.
ಆದರೆ, ಪ್ರಕರಣದ ತನಿಖೆಗೆ ತಡೆ ನೀಡದಂತೆ ಪತ್ನಿ ಶಶಿರೇಖಾ ಪರ ವಕೀಲರು ಮನವಿ ಮಾಡಿದರು. ಅಲ್ಲದೆ, ಸೌಂದರ್ಯ ಜಗದೀಶ್ ಬ್ಲ್ಯಾಕ್ ಮೇಲ್ಗೆ ಒಳಗಾಗಿದ್ದರೆಂಬ ಆರೋಪವಿದೆ. ಜಗದೀಶ್ ಪವಿತ್ರಾಗೌಡಗೆ ಹಣ ವರ್ಗಾವಣೆ ಮಾಡಿದ್ದಾರೆಂದು ಹೇಳಿದ್ದರು. ಹಲವು ಅಂಶಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುರೇಶ್ ಹೇಳಿದ್ದರು. ಹಾಗಾಗಿ, ಜಗದೀಶ್ ಬ್ಲ್ಯಾಕ್ ಮೇಲ್ ಒಳಗಾಗಿರುವ ಸಾಧ್ಯತೆ ಇರುವುದರಿಂದ ಆರೋಪಿಗಳು ಕೇಸ್ ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಏನಿದು ಪ್ರಕರಣ?:
ಏ.18ರಂದು ನಿರ್ಮಾಪಕ ಸೌಂದರ್ಯ ಜಗದೀಶ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಆನಂತರ ಮೇ 18ರಂದು ಅವರ ಮನೆಯ ವಾರ್ಡ್ ರೋಬ್ ಸ್ವತ್ಛ ಮಾಡುವಾಗ ಡೆತ್ನೋಟ್ ಸಿಕ್ಕಿದ್ದು, ಅದರಲ್ಲಿ ಪತಿ ಆರೋಪಿಗಳ ಹೆಸರು ಉಲ್ಲೇಖೀಸಿದ್ದಾರೆಂದು ಜಗದೀಶ್ ಅವರ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.