ಹುಬ್ಬಳ್ಳಿ: ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿ ದಿನದಂದು ಮಹರಾಷ್ಟ್ರ ರಾಜ್ಯದಲ್ಲಿರುವ ಪಂಢರಪುರ ವಿಠಲನ ದೇವಸ್ಥಾನದಲ್ಲಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಿಂದ ಲಕ್ಷಾಂತರ ಭಕ್ತರು ಹೋಗುತ್ತಾರೆ. ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹುಬ್ಬಳ್ಳಿಯಿಂದ ಪಂಢರಪುರಕ್ಕೆ ವಿಶೇಷ ರೈಲು ಓಡಿಸುತ್ತಿದೆ. ಈ ಕುರಿತು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ಮಾಹಿತಿ ಹಂಚಿಕೊಂಡಿದೆ.
ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ಆರು ಟ್ರಿಟ್ಗಳಿಗೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸುತ್ತಿದೆ. ಹಬ್ಬದ ಸಮಯದಲ್ಲಿ ಸುಗಮ ಪ್ರಯಾಣದ ಅನುಭವಕ್ಕಾಗಿ ಈ ಸೇವೆಯ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.
ರೈಲುಗಳ ವೇಳಾಪಟ್ಟಿ ಇಲ್ಲಿದೆ:
ರೈಲು ಸಂಖ್ಯೆ: 07313 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ ವಿಶೇಷ ರೈಲು ನವೆಂಬರ್ 9 ರಿಂದ 15ರವರೆಗೆ ಹುಬ್ಬಳ್ಳಿಯಿಂದ ರಾತ್ರಿ 7:45ಕ್ಕೆ ಹೊರಟು ಮರುದಿನ ನಸುಕಿನ ಜಾವ 4:40ಕ್ಕೆ ಪಂಢರಪುರ ತಲುಪಲಿದೆ.
ರೈಲು ಸಂಖ್ಯೆ: 07314 ಪಂಢರಪುರ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು ನವೆಂಬರ್ 10 ರಿಂದ 16ರವರೆಗೆ ಪಂಢರಪುರದಿಂದ ಬೆಳಗಿನ ಜಾವ 6 ಗಂಟೆಗೆ ಹೊರಟು ಅದೇ ದಿನ ಸಂಜೆ 4:30ಕ್ಕೆ ಹುಬ್ಬಳ್ಳಿ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಶೆಡಬಾಳ, ವಿಜಯನಗರ, ಮೀರಜ್, ಸುಲ್ಗರೆ, ಕವಠೆ-ಮಹಾಕಾಲ್, ಧಲಗಾಂವ್, ಜತ್ ರೋಡ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ರೈಲಿನಲ್ಲಿ 10 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 12 ಬೋಗಿಗಳು ಇರಲಿವೆ. ಈ ರೈಲುಗಳು ಪ್ರತಿ ನಿಲ್ದಾಣಕ್ಕೆ ಆಗಮನ/ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು www.enquiry.indianrail.gov.in ಅಧಿಕೃತ ರೈಲ್ವೆ ವೆಬ್ಸೈಟ್ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ನಂಬರಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.