Wednesday, February 25, 2026
Google search engine

Homeರಾಜ್ಯಸುದ್ದಿಜಾಲಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಯುವುದೂ ಅಷ್ಟೇ ಮುಖ್ಯ : ಪುತ್ತಿಗೆ ಶ್ರೀ

ಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಯುವುದೂ ಅಷ್ಟೇ ಮುಖ್ಯ : ಪುತ್ತಿಗೆ ಶ್ರೀ

ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ೫ ದಿನಗಳ ಜೀವನ ವಿದ್ಯಾ ಸನಿವಾಸ ಶಿಬಿರವನ್ನು ಕಳೆದ ೧೬ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಈ ಬಾರಿಯ ಶಿಬಿರವನ್ನು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗೀತಾ ಲೇಖನ ಬರೆದು ಒಪ್ಪಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಅನುಗ್ರಹ ಸಂದೇಶ ನೀಡಿದ ಅವರು, ಇಂತಹ ಶಿಬಿರ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಲೌಕಿಕ ವಿದ್ಯೆಯೊಂದಿಗೆ ಮನಶ್ಶಾಂತಿ ಪಡೆಯಲು ಆಧ್ಯಾತ್ಮಿಕವಾಗಿ ಬೆಳೆಯುವುದೂ ಅಷ್ಟೇ ಮುಖ್ಯ ಎಂದರಲ್ಲದೆ ಭಗವದ್ಗೀತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಶ್ರೇಷ್ಠ ಗ್ರಂಥ ಎಂದು ಹೇಳಿದರು.

ಬಳಿಕ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ವಿದ್ಯಾಪೋಷಕ್ ನ ೧೦೦೦ ವಿದ್ಯಾರ್ಥಿಗಳಿಗಾಗಿ ಉಚಿತ ಆರೋಗ್ಯ ಕಾರ್ಡನ್ನು ವಿತರಿಸಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯದ ಕುರಿತು ಕೆಲಸ ಮಾಡುವ ಮಾಹೆ ಯಕ್ಷಗಾನ ಕಲಾ ರಂಗದ ಕಾರ್ಯಕ್ರಮಗಳಿಗೆ ಸದಾ ಕೈ ಜೋಡಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ ವಹಿಸಿದ್ದರು. ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯರು ಶುಭಾಶಂಸನೆಗೈದರು. ಶಿಬಿರದ ನಿರ್ದೇಶಕ ಗುರುದತ್ ಬಂಟ್ವಾಳಕರ್ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು.

RELATED ARTICLES
- Advertisment -
Google search engine

Most Popular