ಮೈಸೂರು: ಕಲಿಸು ಫೌಂಡೇಶನ್ ಹಾಗೂ ಸೈಕಲ್ ಪ್ಯೂರ್ ಅಗರ್ ಬತ್ತಿ ಸಹಯೋಗದೊಂದಿಗೆ ನಗರದ ಕ್ವಾಟ್ರಸ್ನಲ್ಲಿರುವ ಆದರ್ಶ ಸರ್ಕಾರಿ ವಿದ್ಯಾಲಯದಲ್ಲಿ ನೂತನವಾಗಿ ಸ್ಥಾಪಿಸಿರುವ ಗ್ರಂಥಾಲಯ ಮತ್ತು ಕ್ರೀಡಾ ಕೊಠಡಿಗಳಿಗಳನ್ನು ಗುರುವಾರ ಉದ್ಘಾಟಿಸಲಾಯಿತು.
ಶಾಲಾ ಮಕ್ಕಳೊಂದಿಗೆ ಟೇಬಲ್ ಟೆನ್ನಿಸ್ ಆಡುವ ಮೂಲಕ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡ ನಾಯಕ ಕರುಣ್ ನಾಯರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಕ್ರೀಡೆಯೂ ಅತ್ಯವಶ್ಯಕ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು
ಮಕ್ಕಳು ಶಿಕಕ್ಷರು ಹೇಳುವ ಮಾತುಗಳನ್ನು ಆಲಿಸಬೇಕು. ನಿಮ್ಮ ಭವಿಷ್ಯದ ಒಳಿತಿಗಾಗಿ ಶ್ರಮಿಸುವ ಪ್ರತಿಯೊಬ್ಬರಿಗೂ ಗೌರವರಿಂದ ನಡೆದುಕೊಳ್ಳಬೇಕು. ಓದಿನ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡು ತಮ್ಮ ಕನಸುಗಳನ್ನು ಸಾಕಾರ ಮಾಡಲು ಶ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.
ಸೈಕಲ್ ಪ್ಯೂರ್ ಅಗರಬತ್ತಿ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ಶಿಕ್ಷಣ ಎಂಬುದು ಪ್ರತಿಯೊಬ್ಬರ ವಿಮೋಚನೆ. ಅದರಿಂದ ಮಾತ್ರ ಮನುಷ್ಯ ಪರಿಪೂರ್ಣ ವ್ಯಕ್ತಿತ್ವ ಮೈಗೂಡಿಸಿಕೊಳ್ಳಲು ಸಾಧ. ಆದ್ದರಿಂದ ಮಕ್ಕಳು ನಿಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಿಸಿಕೊಂಡು ತಮ್ಮ ಗುರಿಗಳತ್ತ ಮುನ್ನುಗ್ಗಬೇಕು ಎಂದು ಹೇಳಿದರು.
ನಿಮ್ಮ ಸಹಪಾಠಿಗಳೊಂದಿಗೆ ಬೆರೆಯಬೇಕು. ಉತ್ತಮ ಸ್ನೇಹಿತರಿಂದ ಪ್ರತಿಯೊಬ್ಬರಿಗೂ ಅನಕೂಲವಿದೆ. ಅವರು ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ನಿಮಗೆ ಬೋಧನೆ ಮಾಡುವ ಪ್ರತಿಯೊಬ್ಬ ಶಿಕ್ಷಕರಿಗೂ ಆತ್ಮೀಯತೆ ಮತ್ತು ಗೌರವದಿಂದ ನಡೆದುಕೊಳ್ಳಬೇಕು. ಅವರು ಹೇಳುವ ಕೆಲಸವನ್ನು ತಪ್ಪದೇ ಮಾಡಬೇಕು. ನಿಮಗೆ ಉತ್ತಮ ಭವಿಷ್ಯ ರೂಪಿಸಬೇಕೆಂಬುದೇ ಅವರ ಗುರಿಯಾಗಿರುತ್ತದೆ. ಆದ್ದರಿಂದ ಗುರುಗಳಿಗೆ ಮತ್ತು ಪೋಷಕರಿಗೆ ಎಂದೂ ಋಣಿಯಾಗಿರುವುದನ್ನು ಕಲಿಯಬೇಕು ಎಂದು ಹೇಳಿದರು.
ಕಲಿಸು ಫೌಂಡೇಶನ್ ಸಂಸ್ಥೆಯ ಸಿಇಒ ನಿಖಿಲೇಶ್.ಎಂ.ಎಂ ಮಾತನಾಡಿ, ಆದರ್ಶ ಶಾಲೆಗೆ ಕಲಿಸು ಸಂಸ್ಥೆ ಕಳೆದ ಎಂಟು ವರ್ಷಗಳಿಂದಲೂ ಬೆನ್ನೆಲುಬಾಗಿ ನಿಂತಿದೆ. ಸೈಕಲ್ ಪ್ಯೂರ್ ಅಗರಬತ್ತಿ ಜೊತೆಗೂಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬೇಕಾದ ಅಗತ್ಯ ಸಹಾಯ ನೀಡುತ್ತಾ ಬಂದಿದ್ದೇವೆ. ಆದರಂತೆ, ಇಂದು ನೂತನ ಗ್ರಂಥಾಲಯ ಮತ್ತು ಕ್ರೀಡಾ ಕೊಠಡಿ ನೀಡಲಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜತೆಗೆ ಕ್ರೀಡೆಯೂ ಅವಶ್ಯಕ ಎಂದು ಹೇಳಿದರು.
ಇದೇ ವೇಳೆ ೨೦೨೧-೨೨ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಅಂಕಗಳಿಸಿದ ಎಕ್ತಾ ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದ ಪುಣ್ಯ ಅವರಿಗೆ ಗೌರವ ಧನದ ಚೆಕ್ ನೀಡಲಾಯಿತು.
ಸಮಾರಂಭದಲ್ಲಿ ದಕ್ಷಿಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು, ಸಮನ್ವಯಾಧಿಕಾರಿ ಶ್ರೀಕಂಠಸ್ವಾಮಿ, ಶಾಲೆಯ ಮುಖ್ಯೋಪಧ್ಯಾಯ ಬೋರ್ರಾಜು, ಹಾಗೂ ಮೈಸೂರು ವಾರಿಯರ್ಸ್ ತಂಡದ ಆಟಗಾರರು ಉಪಸ್ಥಿತರಿದ್ದರು