ಗುಂಡ್ಲುಪೇಟೆ: ಸಂಘಪರಿವಾರ ಹರಡಿರುವ ದ್ವೇಷದ ನಂಜಿನ ಪರಿಣಾಮ ಇಂದು ಇಡೀ ದೇಶವೇ ಹೊತ್ತಿ ಉಳರಿಯುತ್ತಿದ್ದು, ಮಣಿಪುರದಲ್ಲಿ ಜಾನಾಂಗೀಯ ಕಲಹ, ಹರಿಯಾಣಾದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿ RPF ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಫೈರಿಂಗ್ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಬಿಜೆಪಿ ಮತ್ತು ಸಂಘಪರಿವಾರದ ದ್ವೇಷದ ರಾಜಕಾರಣವೇ ಪ್ರಮುಖ ಕಾರಣ. ಇದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ ಎಂದು ಗುಂಡ್ಲುಪೇಟೆ ಟೌನ್ ಅಧ್ಯಕ್ಷ ಸರ್ಫಾರಾಜ್ ಹೇಳಿದರು.
ಬಿಜೆಪಿ ಪಕ್ಷಕ್ಕೆ ಹಿಂಸಾಚಾರ, ಕೋಮು ದ್ವೇಷ ರಾಜಕೀಯ ಅಸ್ತ್ರವಾಗಿದೆ. ಆ ಕಾರಣಕ್ಕಾಗಿಯೇ ಮೂರು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅಲ್ಲಿ ಶಾಂತಿ ಮರಳುವಂತೆ ಮಾಡುವ ನಿಟ್ಟಿನಲ್ಲಿ ಒಂದೇ ಒಂದು ಪ್ರಯತ್ನವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲಿಲ್ಲ. ಪ್ರಧಾನಿ ಮೋದಿ ಅಲ್ಲಿನ ಜನರಿಗೆ ಶಾಂತಿ ಕಾಪಾಡಿ ಎಂದು ಹೇಳುವ ತಮ್ಮ ಕನಿಷ್ಠ ಕರ್ತವ್ಯವನ್ನೂ ಪಾಲಿಸಲಿಲ್ಲ. ಮಣಿಪುರ ಎಂಬ ಪದ ಬಳಸಲೂ ಹಿಂಜರಿದರು. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣ ಹೊರ ಬಂದ ನಂತರ ವಿಧಿ ಇಲ್ಲದೆ ಮಣಿಪುರದ ಬಗ್ಗೆ ಮೋದಿ ಮಾತನಾಡಿದರಾದರು ಆದರೆ ಅವರ ಮಾತಿನಲ್ಲಿ ಘಟನೆಯ ಕುರಿತು ವಿಷಾದ ಅಥವಾ ನೋವಿಗಿಂತ ಹೆಚ್ಚಾಗಿ, ಈ ಘಟನೆಯಿಂದ ತಮ್ಮ ಇಮೇಜಿಗೆ ಧಕ್ಕೆಯಾಗಿದೆ ಅನ್ನುವ ಸಿಟ್ಟು ಎದ್ದು ಕಾಣುತ್ತಿತ್ತು.

ಇನ್ನು ಹರಿಯಾಣಾದಲ್ಲಿ ಕಳೆದ 5-6 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಕೊಂದು ತಲೆ ಮರೆಸಿಕೊಂಡಿರುವ ಮೋನು ಮನೇಸರ್ ಹರಿಬಿಟ್ಟ ಪ್ರಚೋದನಕಾರಿ ವೀಡಿಯೋದಲ್ಲಿರುವ ಭಾಷಣ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಆತ ಹಾಕಿದ ಸವಾಲು ಮುಖ್ಯ ಕಾರಣವಾಗಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ಅಲ್ಲಿನ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾದರು. ಅಲ್ಲಿ ಮಸೀದಿಗಳಿಗೆ ಬೆಂಕಿ ಹಚ್ಚಿ ಒಬ್ಬ ಮುಸ್ಲಿಮ್ ಗುರುಗಳನ್ನು ಕೊಲೆ ಮಾಡಲಾಗಿದೆ ಮತ್ತು 5 ಮಂದಿ ಅಮಾಯಕರು ಜೀವ ತೆತ್ತಿದ್ದಾರೆ.
ದೇಶದ ಎಲ್ಲೆಡೆ ಹಬ್ಬಿದ ದ್ವೇಷದ ವಿಷ ರೈಲ್ವೆ ಭದ್ರತಾ ಸಿಬ್ಬಂದಿಯ ತಲೆಗೂ ಹೊಕ್ಕಿದ್ದು ದುರಂತ. ಮಹಾರಾಷ್ಟ್ರದಲ್ಲಿ RPF ಯೋಧ ಚೇತನ್ ಸಿಂಗ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತನ್ನ ಉನ್ನತ ಅಧಿಕಾರಿಯನ್ನು ಗುಂಡಿಕ್ಕಿ ಕೊಂದು ನಂತರ, ಭೋಗಿಯಿಂದ ಭೋಗಿಗೆ ಹೋಗಿ ಮುಸ್ಲಿಂ ಪ್ರಯಾಣಿಕರನ್ನು ಹುಡುಕಿ 3 ಜನ ಅಮಾಯಕ ಮುಸ್ಲಿಂ ಪ್ರಯಾಣಿಕರನ್ನು ಕೊಂದಿದ್ದಾನೆ. ಇದು ದೇಶದಲ್ಲಿ ಸಂಘಪರಿವಾರದ ಜೊತೆ ಸೇರಿಕೊಂಡು ಗೋದಿ ಮಾಧ್ಯಮ ಹಬ್ಬಿರುವ ದ್ವೇಷದ ಪರಿಣಾಮ ಎಂಬುದು ಹತ್ಯಾಕಾಂಡದ ನಂತರ ಯೋಧ ಮಾತನಾಡಿರುವ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಈ ಎಲ್ಲ ಘಟನೆಗಳನ್ನು ಎಸ್.ಡಿ.ಪಿ.ಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲೂಕು ಅಧ್ಯಕ್ಷರಾದ ಸರ್ಫಾರಾಜ್ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾದ್ಯಕ್ಷ ಅಬ್ರಾರ್ ಅಹಮದ್, ತಾಲೂಕು ಕಾರ್ಯದರ್ಶಿ ರಾಜ್ ಗೋಪಾಲ್ ಹೆಚ್.ಆರ್.ಉಪಾಧ್ಯಕ್ಷ ಸರ್ಧಾರ್, ಸಮಿತಿಯ ಸದಸ್ಯರಾದ ನದ್ವಿಸಾಬ್, ಇರ್ಷಾದ್, ಮುದಾಸಿರ್, ಮುಜಮಿಲ್, ಆಸಿಪ್, ಇಮ್ರಾನ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.