ಶ್ರೀರಂಗಪಟ್ಟಣ: ದಸರಾ ಮಹೋತ್ಸವವು ಅ.೪ರಿಂದ ಪ್ರಾರಂಭವಾಗಲಿದ್ದ, ಇದರ ಅಂಗವಾಗಿ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿರುವ ಆನೆಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಇಂದು ಸಂಜೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ನಾಳಿನ ಕಾರ್ಯಕ್ರಮಗಳ ವಿವರ: ಮಂಡ್ಯ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಅಕ್ಟೋಬರ್ ೪ ರಿಂದ ೭ ರವರೆಗೆ ಶ್ರೀರಂಗಪಟ್ಟಣ ದಸರಾ ಮಹೋತ್ಸವ ನಡೆಯಲಿದ್ದು, ಅಕ್ಟೋಬರ್ ೪ ರಂದು ನಡೆಯುವ ಕಾರ್ಯಕ್ರಮದ ವಿವರ ಹೀಗಿದೆ.
ಅಕ್ಟೋಬರ್ ೪ರಂದು ಬೆಳಿಗ್ಗೆ ೭.೦೦ ಗಂಟೆಗೆ ತಾಲೂಕು ಕ್ರೀಡಾಂಗಣದಿಂದ ?ಫಿಟ್ ಇಂಡಿಯಾ ಮ್ಯಾರಥಾನ್? ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯು ಗಂಜಾಂ ಮಾರ್ಗವಾಗಿ ಕರಿಫಟ್ಟ ದೇವಸ್ಥಾನದವರೆಗೆ ಸ್ಪರ್ಧೆ ನಡೆಯಲಿದೆ. ೨೯ ವರ್ಷ ಒಳಗಿನ ಯುವಕ, ಯುವತಿಯರು ಹಾಗೂ ೩೦ ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಸ್ಪರ್ಧೆ ಆಯೋಜಿಸಲಾಗಿದೆ.
ಮಧ್ಯಾಹ್ನ ೧೨:೩೦ಕ್ಕೆ ಶ್ರೀರಂಗಪಟ್ಟಣದ ಕಿರಂಗೂರಿನ ಬನ್ನಿ ಮಂಟಪದಲ್ಲಿ ?ನಂದಿ ಧ್ವಜ ಪೂಜೆ? ನಡೆಯಲಿದೆ. ಮಧ್ಯಾಹ್ನ ೨:೩೦ ರಿಂದ ೩ ರವರೆಗೆ ಕಿರಗೂರಿನ ಬನ್ನಿ ಮಂಟಪದಿಂದ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ಮಹೇಂದ್ರ (ಅಂಬಾರಿ ಆನೆ) ಹಿರಣ್ಯ ಮತ್ತು ಲಕ್ಷ್ಮಿ (ಆನೆಗಳು) ಇರಲಿದೆ.

ಸಂಜೆ ೬೦೦ ಗಂಟೆಗೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದ ಶ್ರೀರಂಗ ವೇದಿಕೆಯಲ್ಲಿ ದಸರಾ ಮತ್ತು ವೇದಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾತ್ರಿ ೮ ಗಂಟೆಗೆ ಸಂಗೀತ ನಿರ್ದೇಶಕ ಹಾಗೂ ಗಾಯಕರಾದ ವಾಸುಕಿ ವೈಭವ್ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.