ಬೆಂಗಳೂರು: ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಶಮಂತ್ ಮಾವಿನಕೆರೆಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ, ಆರೋಪಿಗಳು ತಮ್ಮ ಪಾಸ್ಪೋರ್ಟ್ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಶರತ್ತಿನಡಿ ಈ ನಿರ್ಧಾರ ತೆಗೆದುಕೊಂಡಿದೆ.
ನಾಲ್ವರು ಆರೋಪಿಗಳು ಪೊಲೀಸ್ ಬಂಧನವನ್ನು ಕಾನೂನುಬಾಹಿರವೆಂದು ಆರೋಪ ಮಾಡಿ ತಕ್ಷಣ ಬಿಡುಗಡೆಗೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂಬ ಅರ್ಜಿ ಸಲ್ಲಿಸಿದ್ದರು. ನಿಖಿಲ್ ಸೋಸಲೆ (ಆರ್ಸಿಬಿ ಮಾರ್ಕೆಟಿಂಗ್ ಹೆಡ್), ಸುನೀಲ್ ಮ್ಯಾಥ್ಯೂ (DNA ಎಂಟರ್ಟೈನ್ಮೆಂಟ್ ನಿರ್ದೇಶಕ), ಕಿರಣ್ ಕುಮಾರ್ (DNA ಮ್ಯಾನೇಜರ್), ಶಮಂತ್ ಮಾವಿನಕೆರೆ (ಸಿಬ್ಬಂದಿ) ಆರೋಪಿಗಳಾಗಿ ಇದ್ದರು.
ವಕೀಲ ಸಂದೇಶ್ ಚೌಟ ವಾದ ಮಂಡಿಸುತ್ತಾ, ಸಿಸಿಬಿ ಪೊಲೀಸರು ತನಿಖೆ ಸಿಐಡಿಗೆ ಹಸ್ತಾಂತರವಾದ ಬಳಿಕವೂ ಬಂಧನ ನಡೆಸಿದ್ದು ಕಾನೂನು ಬಾಹಿರವಾಗಿದೆ ಎಂದರು. ಬಂಧನದ ಕಾರಣ ಮಧ್ಯಾಹ್ನ 2:20ರ ನಂತರ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ. ಎಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಆರೋಪಿಗಳನ್ನು ದೇಶ ತೊರೆದು ಹೋಗುತ್ತಿರುವಾಗ ಬಂಧಿಸಲಾಗಿದೆ ಎಂದು ಪ್ರತಿಪಾದಿಸಿದರು.
ಪೀಠ ಮುಖ್ಯಮಂತ್ರಿಗೆ ಬಂಧನದ ಸೂಚನೆ ನೀಡಲು ಅಧಿಕಾರವಿದೆಯೇ ಎಂಬ ಪ್ರಶ್ನೆ ಎತ್ತಿತು. ವಕೀಲ ಚೌಟ ಅವರು, ಸಿಎಂ ಈ ರೀತಿಯ ನಿರ್ದೇಶನ ನೀಡಲು ಅಧಿಕಾರವಿಲ್ಲ ಎಂಬಂತೆ ಸುಪ್ರೀಂ ಕೋರ್ಟ್ನ ಹಲವು ತೀರ್ಪುಗಳನ್ನು ಉದಾಹರಿಸಿದರು. ಪ್ರಕರಣದ ನಂತರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ, ಆದರೆ ಬಂಧಿಸಲಾಗಿಲ್ಲ ಎಂದರು.
ಪೀಠ ವಿಚಾರಣೆ ಪೂರ್ಣಗೊಳಿಸಿ, ಎಲ್ಲಾ ದೃಷ್ಟಿಕೋನ ಪರಿಗಣಿಸಿ, ಮಧ್ಯಂತರ ಜಾಮೀನು ನೀಡಿದೆ.