ಮೈಸೂರು: ಅಧಿಕ ಮಾಸದ ಪ್ರಯುಕ್ತ ರಾಜ್ಯಾದ್ಯಂತ ಇಂದಿನಿಂದ ಒಂದು ತಿಂಗಳು ಅಯೋಧ್ಯಾ ರಾಮನ ಕೃಪೆಗಾಗಿ ಲೋಕಕ್ಷೇಮಾರ್ಥ ದಶಕೋಟಿ ರಾಮಜಪ ಯಜ್ಞಕ್ಕೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮೈಸೂರಿನಲ್ಲಿ ಚಾಲನೆ ನೀಡಿದರು.
ನಗರದ ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ರಾಮಜಪ ಯಜ್ಞವನ್ನು ಶ್ರೀಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿ ಒಂದು ತಿಂಗಳ ಪರ್ಯಂತ ನಿತ್ಯ ೧೦೮ ಬಾರಿ ಶ್ರೀರಾಮಜಪ ಯಜ್ಞವನ್ನು ಸಾಮೂಹಿಕವಾಗಿ ಮಾಡುವುದರಿಂದ ನಮಗೆಲ್ಲ ವೈಯುಕ್ತಿಕವಾಗಿ ಮತ್ತು ಸಾಮೂಹಿಕವಾಗಿ ರಾಮನ ಕೃಪೆಯಾಗುತ್ತದೆ ಎಂದು ತಿಳಿಸಿದರು.
ಸಮಾಜದಲ್ಲಿರುವ ರಾವಣನಂಥ ದುಷ್ಟ ಪ್ರಭಾವಗಳು ದೂರವಾಗಿ ರಾಮನಂಥ ಸದ್ಗುಣಗಳು ಜಾಗೃತವಾಗಿ ಎಲ್ಲರಿಂದಲೂ ಒಳ್ಳೆಯ ಚಿಂತನೆಗಳು ಒಳ್ಳೆಯ ಕೆಲಸಗಳನ್ನು ಮಾಡಲು ಸ್ಫೂರ್ತಿ ಉತ್ಸಾಹ ದೊರೆತಾಗ ಇಡೀ ನಾಡಿಗೆ ಮಂಗಲವಾಗುತ್ತವೆ. ಒಂದು ತಿಂಗಳು ಮಾತ್ರವಲ್ಲದೇ ಜೀವನವಿಡೀ ರಾಮನ ಸ್ಮರಣೆಯನ್ನು ಮಾಡಿ ಅಥವಾ ಪ್ರತಿದಿನ ಕನಿಷ್ಠ ಹತ್ತು ಬಾರಿಯಾದರೂ ತಮ್ಮ ಮನೆಗಳಲ್ಲಿ ರಾಮನ ಸ್ಮರಣೆ ಮಾಡುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಿ, ರಾಮಜಪವನ್ನು ಬೋಧಿಸಿದರು.
೨೩೦೦ ವಿದ್ಯಾರ್ಥಿಗಳಿಂದ ಸಾಮೂಹಿಕ ರಾಮಜಪಗೈದು, ಕೊನೆಯಲ್ಲಿ ಲೋಕದ ಶಾಂತಿ ಸುಭಿಕ್ಷೆ ಸಮೃದ್ಧಿ ಸಹಿತ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದ ಬಳಿಕ ಪುಟಾಣಿ ಮಕ್ಕಳ ತರಗತಿಗೆ ಶ್ರೀಗಳು ಭೇಟಿ ನೀಡಿದಾಗ ಎಲ್ಲ ಪುಟಾಣಿಗಳೂ ಜೈಶ್ರೀರಾಮ್ ಘೋಷಣೆಯೊಂದಿಗೆ ಶ್ರೀಗಳಿಗೆ ಗೌರವ ಸಲ್ಲಿಸಿದರು.
ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ಪ್ರಾಚಾರ್ಯ ಎಸ್.ಎ.ವೀಣಾ, ಶಿಕ್ಷಕ ವೃಂದ , ಬೋಧಕೇತರ ಸಿಬ್ಬಂದಿಗಳೂ ಉಪಸ್ಥಿತರಿದ್ದು ರಾಮಜಪ ಮಾಡಿದರು.