ಚಿಕ್ಕಬಳ್ಲಾಪುರ: ತಮಿಳುನಾಡಿಗೆ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿದ್ದು, ತಮಿಳುನಾಡಿಗೆ ಕಾವೇರು ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೆ ವಜಾ ಮಾಡುತ್ತಾರೆ. ಯಾವುದೇ ಸರ್ಕಾರ ಇದ್ದರೂ ಸಹ ನೀರು ಬಿಡುತ್ತಿದ್ದರು ಎಂದು ಹೇಳಿದ್ದಾರೆ.
ಇಂದು ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ಬೇಡಿಕೊಂಡರೂ ಮೋದಿ ಸಮಯ ನೀಡುತ್ತಿಲ್ಲ, ಪ್ರಧಾನಮಂತ್ರಿ ಮೋದಿ ಎರಡು ರಾಜ್ಯಗಳನ್ನು ಚರ್ಚೆಗೆ ಕರೆಯಬೇಕಿತ್ತು. ಆದ್ರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ತಮಿಳುನಾಡು ವಿರುದ್ಧ ಆರೋಪ ಮಾಡಿದರೆ ಯಾವ ಪ್ರಯೋಜನವಿಲ್ಲ. ಅವರ ಹಕ್ಕು ಅವರು ಕೇಳುತ್ತಿದ್ದಾರೆ, ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಯರಿಸಬೇಕು. ಆದರೆ, ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕೆ ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ. ಕಾವೇರಿ ವಿವಾದ ಬಗೆಯರಿಸುವುದು ಅವರಿಗೆ ಬೇಕಿಲ್ಲ. ಬದಲಿಗೆ ರಾಜ್ಯಗಳು ಕಿತ್ತಾಡಬೇಕು ಮೋದಿ ಸರ್ವಾಧಿಕಾರಿಯಾಗಿ ಇರಬೇಕು ಎನ್ನುವ ಭಾವನೆ ಹೊಂದಿದ್ದಾರೆ ಎಂದು ಕಿಡಿಕಾರಿದರು.