ಮೈಸೂರು: ಅರಮನೆ ಮುಂದೆ ನಿತ್ಯ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸುವ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿತ್ತು. ಈ ವಿಚಾರವಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾರ್ವಜನಿಕರು, ತಜ್ಞರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪರ-ವಿರೋಧ ಚರ್ಚೆ ನಡೆದ ಬಳಿಕ, ಪಾರಿವಾಳಗಳಿಗೆ ಆಹಾರ ನೀಡುವುದನ್ನ ನಿಲ್ಲಿಸುತ್ತೇವೆ ಎಂದು ಖಬೂತರ್ ದಾನ್ ಜೈನ್ ಸಂಘಟನೆ ತಿಳಿಸಿದೆ.
ಪಾರಿವಾಳಗಳಿಗೆ ಆಹಾರ ಹಾಕುವ ಪದ್ದತಿ ರದ್ದತಿ ಮತ್ತು ಕಾಳು ಹಾಕುವುದರಿಂದ ಉದ್ಭವಿಸುವ ಸಮಸ್ಯೆಗಳ ವಿಚಾರವಾಗಿ ಇಂದು (ಸೆ.22) ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಬಳಿ ನಾಗರೀಕರ ಜಾಗೃತ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯರು, ಪರಿಸರವಾದಿಗಳು, ಸಾಮಾಜಿಕ ತಜ್ಞರು ಸೇರಿ ಹಲವರು ಭಾಗಿಯಾಗಿದ್ದರು.
ಸಭೆಯಲ್ಲಿ ಖಬೂತರ್ ದಾನ್ ಜೈನ್ ಸಂಘಟನೆ ಮುಖ್ಯಸ್ಥ ವಿನೋದ್ ಮಾತನಾಡಿ, ಈಗಾಗಲೇ ನೀವೆಲ್ಲರೂ ಸಾಕಷ್ಟು ವಿಚಾರಗಳನ್ನ ಚರ್ಚೆ ಮಾಡಿದ್ದೀರಿ, ಪಾರಿವಾಳಗಳಿಂದ ಅರಮನೆ ಪ್ರತಿಮೆಗಳಿಗೆ ಆಗುತ್ತಿರುವ ಹಾನಿ ಬಗ್ಗೆ ತಿಳಿಸಿದ್ದೀರಿ. ಹೀಗಾಗಿ ನಾವು ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸುತ್ತೇವೆ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದರು.
ಪಾರಿವಾಳಗಳಿಂದ ಪಾರಂಪರಿಕ ಕಟ್ಟಡಗಳಿಗೆ ತೊಂದರೆ: ತಜ್ಞ ರಂಗರಾಜು
ಪಾರಿವಾಳಗಳ ಇಕ್ಕೆಯಿಂದ ಅರಮನೆ ಸುತ್ತಮುತ್ತಲ್ಲಿನ ಪ್ರತಿಮೆ, ಮತ್ತು ಅರಮನೆಗೆ ತೊಂದರೆಯಾಗುತ್ತಿದೆ. ಪಾರಿವಾಳಗಳಿಗೆ ಅರಮನೆ ಮುಂಭಾಗ ಆಹಾರ ನೀಡುವುದನ್ನು ನಿಲ್ಲಿಸಬೇಕು. ಪಾರಿವಾಳಗಳ ಇಕ್ಕೆಯಿಂದ ಬಿಡುಗಡೆಯಾಗುವ ಯೂರಿಕ್ ಆಸೀಡ್ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗುತ್ತದೆ. ಅರಮನೆ ಸುತ್ತಮುತ್ತಲಿನ ಮಹರಾಜರ ಪ್ರತಿಮೆಗಳ ಮೇಲೆ ಕುಳಿತು ಇಕ್ಕೆ ಹಾಕುವುದರಿಂದ ಪ್ರತಿಮೆ ಹಾಳಾಗುತ್ತದೆ. ಪಾರಿವಾಳ ತನ್ನ ಆಹಾರವನ್ನು ನೈಸರ್ಗಿಕವಾಗಿ ಹುಡುಕಿಕೊಳ್ಳುತ್ತದೆ. ಅವುಗಳಿಗೆ ಬರ್ತ್ ಡೇ, ವೆಡ್ಡಿಂಗ್, ಫೋಟೋ ಶೂಟ್ ನೆಪದಲ್ಲಿ ಆಹಾರ ನೀಡಿ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆ ತರಬೇಡಿ ಎಂದು ಸಾರ್ವಜನಿಕ ಸಭೆಯಲ್ಲಿ ಇತಿಹಾಸ ತಜ್ಞ ರಂಗರಾಜು ಮನವಿ ಮಾಡಿದರು.
ಪಾರಿವಾಳಗಳನ್ನು ಆಕಾಶದ ಇಲಿಗಳು ಅಂತಾ ಕರೆಯಲಾಗುತ್ತದೆ. ಇಲಿಗಳಂತೆ ಪಾರಿವಾಳ ಸ್ವಾವಲಂಬಿ. ಪಾರಿವಾಳಗಳದಿಂದ ಆಗುವ ತೊಂದರೆ ಬಗ್ಗೆ ತಾಯಿ ಪ್ರಮೋದ ದೇವಿ ಒಡೆಯರ್ ದೂರು ನೀಡಿದರು. ಅವರಿಗೆ ಸಾಕಷ್ಟು ದೂರುಗಳು ಪಾರಿವಾಳಗಳ ಬಗ್ಗೆ ಬಂದಿತ್ತು. ಇದು ವನ್ಯಜೀವಿ ಸಂತತಿಗೆ ಸೇರಿದ ಪಕ್ಷಿ. ಇವುಗಳಿಗೆ ಆಹಾರ ಕೊಡುವ ಅವಶ್ಯಕತೆ ಇಲ್ಲ. ಪಾರಿವಾಳಗಳ ಇಕ್ಕೆಯಲ್ಲಿನ ಯೂರಿಕ್ ಆ್ಯಸಿಡ್ನಿಂದ ಪಾರಪಂರಿಕ ಕಟ್ಟಡಗಳಿಗೆ ಧಕ್ಕೆ ಆಗಲಿದೆ ಎಂದು ಸಂಸದ ಯದುವೀರ್ ಓಡೆಯರ್ ಹೇಳಿದರು.

ಈ ಪಾರಿವಾಳಗಳಿಂದ ಅಸ್ತಮ, ಅಲರ್ಜಿ, ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಚಾಮರಾಜ ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿಯಾಗುತ್ತದೆ. ಪಾರಿವಾಳಗಳಿಗೆ ಕಾಳು ಹಾಕುವುದನ್ನು ನಿಲ್ಲಿಸುವುದಕ್ಕೆ ಕಾನೂನು ಆಗಬೇಕಿದೆ.ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ. ಸಾರ್ವಜನಿಕ ಆರೋಗ್ಯ ಕಾಳಜಿಯಿಂದ ಪಾರಿವಾಳಗಳಿಗೆ ಅಹಾರ ಹಾಕುವುದನ್ನು ನಿಲ್ಲಿಸಬೇಕು ಎಂದರು.