ದಾವಣಗೆರೆ: ರೈತರೊಬ್ಬರಿಂದ ಸರ್ವೇ ಸೂಪರ್ ವೈಸರ್ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ADLR (ಭೂ ದಾಖಲೆಗಳ ಸಹಾಯಕ ನಿರ್ದೇಶಕರು) ಕಚೇರಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಸರ್ವೇ ಸೂಪರ್ ವೈಸರ್ ಕೆ.ಹೆಚ್. ಅಂಜಿನಪ್ಪನ್ನ ಲೋಕಾಯುಕ್ತರು ಅರೆಸ್ಟ್ ಮಾಡಿದ್ದಾರೆ.
ದಾವಣಗೆರೆ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ‘ದ್ವಾರಕಾ ಲಾಡ್ಜ್’ನಲ್ಲಿ 50 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಅಂಜಿನಪ್ಪನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಧುರ ನಾಯಕನಹಳ್ಳಿಯ ರೈತರಾದ ಎ.ಬಿ. ಕುಮಾರನಾಯಕ ಎಂಬುವವರ ಜಮೀನಿನ ಹದ್ದುಬಸ್ತು ಮಾಡಿಕೊಡಲು ಅಂಜಿನಪ್ಪ ಅವರು ಒಟ್ಟು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ, ಮೊದಲ ಕಂತಾಗಿ 50 ಸಾವಿರ ರೂಪಾಯಿಗಳನ್ನು ತನ್ನ ಸ್ನೇಹಿತ ಶ್ರೀಧರ್ ಮೂಲಕ ರೈತನಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಸರ್ವೇ ಸೂಪರ್ ವೈಸರ್ ಅಂಜಿನಪ್ಪ ಹಾಗೂ ಆತನಿಗೆ ಸಾಥ್ ನೀಡಿದ ಸ್ನೇಹಿತ ಶ್ರೀಧರ್ ಇಬ್ಬರನ್ನೂ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



