Monday, April 21, 2025
Google search engine

Homeರಾಜ್ಯಸುದ್ದಿಜಾಲಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಪರಿಕಲ್ಪನೆಯ ಆದರ್ಶ ಚಿಂತನೆಗಳು ಸಾರ್ವಕಾಲಿಕ : ಸುರೇಶ್ ಋಗ್ವೇದಿ

ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಪರಿಕಲ್ಪನೆಯ ಆದರ್ಶ ಚಿಂತನೆಗಳು ಸಾರ್ವಕಾಲಿಕ : ಸುರೇಶ್ ಋಗ್ವೇದಿ

ಚಾಮರಾಜನಗರ: ಭಾರತದ ಶ್ರೇಷ್ಠ ಸಂಸ್ಕ್ರತಿ, ಪರಂಪರೆಯನ್ನು ಇಡೀ ವಿಶ್ವಕ್ಕೆ ಅನಾವರಣಗೊಳಿಸಿದ ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಪರಿಕಲ್ಪನೆಯ ಆದರ್ಶ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಉಪನ್ಯಾಸಕರು ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕ್ರತರಾದ ಸುರೇಶ್ ಎನ್. ಋಗ್ವೇದಿ ಅವರು ತಿಳಿಸಿದರು.
ನಗರದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಗೂ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಯುವ ದಿನ’ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ರಾಷ್ಟ್ರದ ಯುವಜನತೆಗೆ ಮಾದರಿ ಶಕ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶದ್ಯಾಂತ ಆಚರಿಸಲಾಗುತ್ತಿದೆ. ಇಡೀ ಯುವಶಕ್ತಿ ಸಂಭ್ರಮಿಸುವ ದಿನ ಇದಾಗಿದೆ. ದೇಶದ ಅಭಿವೃದ್ಧಿಗಾಗಿ ಯುವಶಕ್ತಿಯ ಸೇವಾ ಮನೋಭಾವ, ಗುಣಶ್ರೇಷ್ಠತೆ, ತ್ಯಾಗ, ಏಕಾಗ್ರತೆ ಹೇಗಿರಬೇಕು ಎಂದು ತಮ್ಮ ಸಂದೇಶಗಳ ಮೂಲಕ ಸಾರಿದ ವಿವೇಕಾನಂದರು ಯುವಕರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸಿದರು. ಯುವಜನತೆಗೆ ರಾಷ್ಟ್ರೀಯ ಪರಿಕಲ್ಪನೆಯನ್ನು ಬಿತ್ತಿದವರಲ್ಲಿ ವಿವೇಕಾನಂದರು ಮೊದಲಿಗರಾಗಿದ್ದಾರೆ ಎಂದರು.

ದೇಶದಲ್ಲಿನ ಬಡತನ, ಜಾತೀಯತೆಯಿಂದ ಭಾರತೀಯರನ್ನು ಕೇವಲವಾಗಿ ನೋಡುತ್ತಿದ್ದ ವಿದೇಶಿಯರಿಗೆ ಚಿಕಾಗೋ ವಿಶ್ವಸಮ್ಮೇಳನದಲ್ಲಿ ಸಹೋದರ, ಸಹೋದರಿಯರೇ ಎಂದು ಮಾನವತೆಯ ದಿವ್ಯಸಂದೇಶದ ಮೂಲಕ ಉಪನ್ಯಾಸ ಆರಂಭಿಸಿದ ವಿವೇಕಾನಂದರು ಇಡೀ ಜಗತ್ತು ಅಭಿಮಾನ, ಆತ್ಮವಿಶ್ವಾಸದಿಂದ ಭಾರತದತ್ತ ನೋಡುವಂತೆ ಮಾಡಿದರು. ಪ್ರಪಂಚದಲ್ಲಿ ಸಾಕಷ್ಟು ಸಂಸ್ಕ್ರತಿ, ನಾಗರಿಕತೆಗಳು ಬಂದು ಹೋಗಿವೆ. ಆದರೆ ಭಾರತೀಯ ಸಂಸ್ಕ್ರತಿ, ಪರಂಪರೆಯ ಜೀವಂತಿಕೆಗೆ ವಿವೇಕಾನಂದರ ಕೊಡುಗೆ ಅಪಾರವಾಗಿದೆ ಎಂದು ಸುರೇಶ್ ಋಗ್ವೇದಿ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ದೇಶದ ಆಧುನಿಕ ಚಿಂತಕ, ತತ್ವಜ್ಞಾನಿ, ದಾರ್ಶನಿಕರಾಗಿದ್ದಾರೆ. ಯುವಜನರಲ್ಲಿದ್ದ ಸಾಮಾಜಿಕ ಮೌಢ್ಯವನ್ನು ತೊಡೆಯಲು ಸತ್ಯಶೋಧನೆ ಮೂಲಕ ದೇಶದ ಪ್ರಗತಿ ಪೂರಕವಾಗಿ ಕೊಡುಗೆ ನೀಡಿದವರಲ್ಲಿ ವಿವೇಕಾನಂದರು ಪ್ರಮುಖರು. ಅವರ ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕೆ.ಸಿ. ಬಸವಣ್ಣ ಅವರು ಮಾತನಾಡಿ ಜಗತ್ತಿನ ಅತಿದೊಡ್ಡ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶಭಕ್ತ, ಧಾರ್ಮಿಕ, ವೈಜ್ಞಾನಿಕ ಚಿಂತಕ, ಸಮಾಜ ಸುಧಾರಕರು ಹೌದು. ಇಡೀ ವಿಶ್ವಕ್ಕೆ ಭಾರತ ದರ್ಶನ ಮಾಡಿಸಿದ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ. ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಜಿಲ್ಲಾ ಯುವ ಪ್ರಶಸ್ತಿ ಪುರಸ್ಕ್ರತರಾದ ಜಿ. ಬಂಗಾರು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಮಹದೇವಪ್ರಸಾದ್ ಅವರುಗಳು ರಾಷ್ಟ್ರೀಯ ಯುವ ಸಪ್ತಾಹದ ಉದ್ದೇಶ ಹಾಗೂ ಸ್ವಾಮಿ ವಿವೇಕಾನಂದರ ಮೌಲ್ಯಯುತ ವಿಚಾರಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ನೆಹರು ಯುವ ಕೇಂದ್ರ ಸಹನ. ಶಂಕರ್, ಅಂಜು ನಾಯಕ್, ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಗ್ರಂಥಾಲಯದ ಶಿವಶಂಕರರಾಜೇ ಅರಸ್ ಅವರು ಏಡ್ಸ್ ನಿಯಂತ್ರಣದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ನೆಹರು ಯುವ ಕೇಂದ್ರದ ಸಿಬ್ಬಂದಿಗಳುಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular