ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಿರಂತರ ಪ್ರಯತ್ನದಿಂದ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಜಿ.ಮಂಜುನಾಥ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 2024- 25ನೇ ಸಾಲಿನ ಶ್ರೀ ಬೈರವೇಶ್ವರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತಿ ಹೆಚ್ಚು ಬಹುಮಾನಗಳನ್ನು ಪಡೆದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಾವು ತೊಡಗಿಸಿಕೊಳ್ಳುವ ಯಾವುದೇ ಕ್ಷೇತ್ರದಲ್ಲಿಯಾದರೂ ಶ್ರದ್ಧೆಯಿಂದ ತೊಡಗಿಸಿಕೊಂಡು ಕಾರ್ಯ ಪ್ರವೃತ್ತರಾದರೆ ಅದರಲ್ಲಿ ಗುರಿಮುಟ್ಟಬಹುದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರೆ ಆ ಮೂಲಕ ತಮ್ಮೊಳಗೆ ಇರುವ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ.
ಶಿಕ್ಷಕರು, ಪೋಷಕರುಗಳು ಕೂಡ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಆ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲು ಸಹಕಾರ, ಮಾರ್ಗದರ್ಶನ ಮಾಡುವ ಕೆಲಸ ಮಾಡಬೇಕು ಎಂದರು.
ಯಾವುದೇ ಸ್ಪರ್ಧೆಯಲ್ಲಾದರೂ ಸ್ಪರ್ದಾಳುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದರೆ ಹಿಗ್ಗದೇ, ಸೋತರೆ ಕುಗ್ಗದೆ ನಮ್ಮ ಗುರಿಯತ್ತ ನಾವು ಸನ್ಮಾರ್ಗದಲ್ಲಿ ನಡೆಯಬೇಕು, ಸ್ಪರ್ದಾಳುಗಳು ಪರಸ್ಪರ ಸಹೋದರರಂತೆ ನಡೆದುಕೊಳ್ಳಬೇಕು ಎಂದರು.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಚಾಂಪಿಯನ್ ಪಡೆದರೆ ಮತ್ತೊಂದೆಡೆ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ಪಡೆಯುವ ಮೂಲಕ ಶಾಲೆಗೆ ಉತ್ತಮ ಹೆಸರು ತಂದುಕೊಟ್ಟರೆ ಮತ್ತಷ್ಟು ಕ್ರೀಡಾಪಟುಗಳು ಹಲವು ಬಹುಮಾನಗಳನ್ನು ಪಡೆಯುವ ಮೂಲಕ ಶಾಲೆಗೆ ಹೆಸರು ತಂದಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿಸಲು ಶಾಲೆಯ ದೈಹಿಕ ಶಿಕ್ಷಕ ಹುಸೇನ್ ಭಾಷಾ ಅವರ ಕಾರ್ಯ ಪ್ರಮುಖ ಪಾತ್ರ ವಹಿಸುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕರೆದೊಯ್ಯುವ ಕೆಲಸವು ಆಗಲಿ ಎಂದು ಶುಭ ಹಾರೈಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯವರು ಅಭಿನಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳು:
ಖೋ ಖೋ – ಬಾಲಕರು ಮತ್ತು ಬಾಲಕಿಯರು ( ಪ್ರಥಮ ಸ್ಥಾನ), ರಿಲೇ – ಬಾಲಕರು (ಪ್ರಥಮ ಸ್ಥಾನ),
ಹೆಚ್.ಜೆ.ಸಂಜಯ್ – 200ಮೀಟರ್ ಓಟ (ಪ್ರಥಮ), 100ಮೀಟರ್ ಓಟ ( ತೃತಿಯ), ಎಸ್.ಎಮ್.ರೋಹಿಣಿ – ತ್ರಿವಿಧ ಜಿಗಿತ (ದ್ವಿತೀಯ), ಗಾನವಿ – ಎತ್ತರ ಜಿಗಿತ (ತೃತೀಯ).
ವೈಯಕ್ತಿಕ ಚಾಂಪಿಯನ್ ಕ್ರೀಡಾಪಟುಗಳು: ಹೆಚ್.ವಿ.ವರುಣ್ – 400ಮೀಟರ್ ಓಟ (ಪ್ರಥಮ), ಗುಂಡು ಎಸೆತ (ದ್ವಿತೀಯ), ತಟ್ಟೆ ಎಸೆತ (ದ್ವಿತೀಯ).
ಹೆಚ್.ಡಿ.ಆದಿತ್ಯ – ಜಾವೆಲಿನ್ ಎಸೆತ (ಪ್ರಥಮ), ತ್ರಿವಿಧ ಜಿಗಿತ (ಪ್ರಥಮ), ಉದ್ದ ಜಿಗಿತ ( ತೃತಿಯ).
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಹುಸೇನ್ ಭಾಷ, ಶಿಕ್ಷಕರಾದ ಎಸ್.ರೂಪ, ಜಿ.ಜ್ಯೋತಿ, ರಕ್ಷಾಗಣೇಶ್, ಸುಧಾಮಣಿ, ದಿವ್ಯಾ, ಎಸ್ ಡಿ ಎಂ ಸಿ ಸದಸ್ಯ ಜಗ ಇದ್ದರು.