ಬೆಂಗಳೂರು: ಮಂಗಳಮುಖಿ ತನುಶ್ರೀ ಅಲಿಯಾಸ್ ನವೀನ್ ಹತ್ಯೆ ಪ್ರಕರಣವನ್ನು ಕೆ.ಆರ್.ಪುರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮೂರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಸೀಗೇಹಳ್ಳಿಯ ಜಗದೀಶ್ (29), ಪ್ರಭಾಕರ್ (34) ಮತ್ತು ಸುಶಾಂತ್ (32). ಏಪ್ರಿಲ್ 17 ರಂದು ತನುಶ್ರೀ ಅವರನ್ನು ಮಾರಕಾಸ್ತ್ರದಿಂದ ಕತ್ತು ಹಾಗೂ ದೇಹದ ಇತರೆ ಭಾಗಗಳನ್ನು ಕೊಯ್ದು ಹತ್ಯೆಗೈದು ಪರಾರಿಯಾಗಿದ್ದರು.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಆರೋಪಿ ಜಗದೀಶ್ ಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ. ತನುಶ್ರೀಯು ಅವನಿಗೆ 1 ವರ್ಷದ ಹಿಂದೆಯೇ ಪರಿಚಿತೆಯಾಗಿದ್ದಳು. ಇಬ್ಬರೂ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈ ನಡುವೆ ತನುಶ್ರೀ ಜಗದೀಶ್ ಮೇಲೆ ವ್ಯಾಮೋಹ ಹೊಂದಿ, ಮದುವೆಗೆ ಒತ್ತಾಯಿಸುತ್ತಿದ್ದಳು. ಅವನು ನಿರಾಕರಿಸಿದ್ದರಿಂದ ಜಗಳಗಳು ನಡೆಯುತ್ತಿದ್ದವು.
ತಾನು ಬೆದರಿಕೆ ಹಾಕುತ್ತಿದ್ದುದರಿಂದ ಕೋಪಗೊಂಡ ಜಗದೀಶ್, ಸ್ನೇಹಿತರಾದ ಪ್ರಭಾಕರ್ ಹಾಗೂ ಸುಶಾಂತ್ ಜೊತೆ ಸೇರಿ ಹತ್ಯೆ ಸಂಚು ರೂಪಿಸುತ್ತಾನೆ. ಏ.17ರಂದು ಮದ್ಯಪಾನ ನಡೆಸಿದ ಬಳಿಕ ತನುಶ್ರೀಯನ್ನು ಹತ್ಯೆ ಮಾಡುತ್ತಾರೆ.
ವೈಟ್ಫೀಲ್ಡ್ ಉಪವಿಭಾಗದ ಎಸಿಪಿ ರೀನಾ ಸುವರ್ಣ ಹಾಗೂ ಪಿಐ ರಾಮೂರ್ತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ತಿರುಪತಿಗೆ ಹೋಗಿದ್ದ ಆರೋಪಿಗಳನ್ನು ಶಿಡ್ಲಘಟ್ಟದಲ್ಲಿ ಬಂಧಿಸಲಾಗಿದೆ. ತನುಶ್ರೀ ಕೋಟ್ಯಧಿಪತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು.