ಬೆಂಗಳೂರು: ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರ್ನಲ್ಲಿ ಆರಂಭಗೊಳ್ಳುತ್ತಿರುವ ಪ್ರಥಮ ಜೈವಿಕ ಉದ್ಯಾನಕ್ಕೆ ವನ್ಯಜೀವಿ ನಿರ್ವಹಣೆ ಮತ್ತು ಪಕ್ಷಿಗಳ ಸಂರಕ್ಷಣೆಗೆ ಕರ್ನಾಟಕದಿಂದ ತಾಂತ್ರಿಕ ಸಹಕಾರ ನೀಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮತಿಸಿದ್ದಾರೆ.
ವಿಕಾಸಸೌಧದಲ್ಲಿ ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್ ಭೇಟಿಯಾಗಿ ಈ ಮನವಿ ಮಾಡಿದ್ದರು. ಆಸ್ಟ್ರೇಲಿಯಾದ ಜಾನ್ ಸಿಯೋ ವಿನ್ಯಾಸಗೊಳಿಸಿರುವ ಈ ಉದ್ಯಾನವು 136.8 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದ್ದು, ಆಗಸ್ಟ್ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ನೂತನ ಮೃಗಾಲಯಕ್ಕೆ ಕರ್ನಾಟಕದ ಮೃಗಾಲಯಗಳಿಂದ ಹೆಚ್ಚುವರಿ ವನ್ಯಜೀವಿಗಳನ್ನು ನೀಡುವಂತೆ ಕೇರಳ ಸಚಿವರು ಮನವಿ ಮಾಡಿದ್ದಾರೆ. ಈ ಸಭೆಯಲ್ಲಿ ಡೀಮ್ಡ್ ಅರಣ್ಯ ಮತ್ತು ಕಸ್ತೂರಿರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಿತು.
ಕರ್ನಾಟಕದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್ ಮತ್ತು ಕೇರಳದ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ ಕೃಷ್ಣನ್ ಸಭೆಯಲ್ಲಿ ಭಾಗಿಯಾಗಿದ್ದರು.