ನವದೆಹಲಿ: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಏ.26) ಮುಂಜಾನೆ. ಜ್ಯೂರಿಚ್ಗೆ ಹೊರಟಿದ್ದ ಸ್ವಿಸ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇದರಿಂದ ಇಂದು ಸಂಭವಿಸಬಹುದಾಗಿದ್ದ ಭಾರಿ ವಿಮಾನ ದುರಂತವೊಂದು ಪೈಲಟ್ಗಳ ಸಮಯಪ್ರಜ್ಞೆಯಿಂದ ತಪ್ಪಿದೆ.
ದೆಹಲಿಯಿಂದ ಜ್ಯೂರಿಚ್ಗೆ ಹೊರಟಿದ್ದ ಸ್ವಿಸ್ ಇಂಟರ್ನ್ಯಾಷನಲ್ ಏರ್ ಲೈನ್ಸ್ (LX147) ವಿಮಾನವು ಇಂದು ಮುಂಜಾನೆ ರನ್ವೇಯಲ್ಲಿ ಪ್ರಯಾಣಿಸುವಾಗ ತಾಂತ್ರಿಕ ಸಂಕಷ್ಟ ಕಾಣಸಿಕೊಂಡಿದ್ದು, ಎಂಜಿನ್ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
ವಿಮಾನವು ರನ್ವೇ 28/10 ರಲ್ಲಿ ಜ್ಯೂರಿಚ್ಗೆ ಹಾರಲು ವೇಗವನ್ನು ಹೆಚ್ಚಿಸುತ್ತಿದ್ದಾಗ, ಪೈಲಟ್ಗಳು ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಪತ್ತೆಹಚ್ಚಿದರು. ವಿಮಾನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಪೈಲಟ್ಗಳು, ಒಂದು ಕ್ಷಣವೂ ತಡಮಾಡದೆ ಟೇಕ್ ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ವಿಮಾನವನ್ನು ರನ್ವೇಯಲ್ಲೇ ನಿಲ್ಲಿಸಿದರು. ಪೈಲಟ್ಗಳ ಈ ತ್ವರಿತ ನಿರ್ಧಾರದಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದೆ.
ವಿಮಾನದಲ್ಲಿ 228 ಪ್ರಯಾಣಿಕರು ಮತ್ತು 4 ಶಿಶುಗಳು ಸೇರಿದಂತೆ ಒಟ್ಟು 232 ಮಂದಿ ಇದ್ದರು. ಹೊಗೆ ಕಾಣಿಸಿಕೊಂಡಿದ್ದರಿಂದ ಭಯಭೀತರಾಗಿದ್ದ ಪ್ರಯಾಣಿಕರನ್ನು ತುರ್ತು ಸ್ಲೈಡ್ಗಳನ್ನು ಬಳಸಿ ಕೆಳಗಿಳಿಸಲಾಯಿತು. ಈ ಘಟನೆಯಲ್ಲಿ ಆರು ಪ್ರಯಾಣಿಕರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಗಂಭೀರ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಎಲ್ಲಾ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಲಾಯಿತು. ಪ್ರಸ್ತುತ ಸ್ವಿಸ್ ಏರ್ ವಿಮಾನವನ್ನು ತಾಂತ್ರಿಕ ತಂಡಗಳು ಪರಿಶೀಲಿಸುತ್ತಿವೆ. ಎಂಜಿನ್ ಅಸಮರ್ಪಕ ಕಾರ್ಯಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ಹೋಟೆಲ್ ವಸತಿ ಮತ್ತು ಜ್ಯೂರಿಚ್ಗೆ ತೆರಳಲು ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದೆ.



