Wednesday, April 9, 2025
Google search engine

Homeರಾಜಕೀಯಪಠ್ಯ ಪುಸ್ತಕ ಪರಿಷ್ಕರಣೆ: ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದವರ ಸಭೆ ನಡೆಸಲು ಬಿಜೆಪಿ ನಿರ್ಧಾರ

ಪಠ್ಯ ಪುಸ್ತಕ ಪರಿಷ್ಕರಣೆ: ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದವರ ಸಭೆ ನಡೆಸಲು ಬಿಜೆಪಿ ನಿರ್ಧಾರ

ಬೆಂಗಳೂರು: ಶಾಲೆಗಳು ಆರಂಭವಾದ ನಂತರವೂ ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗುತ್ತಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದ ಎಂಎಲ್‍ಎ ಗಳು, ಎಂಎಲ್ ಸಿಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಿದೆ.

ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರವು ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದರ ಬಗ್ಗೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಚರ್ಚಿಸಲಾಯಿತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ.ಸಿ.ನಾಗೇಶ್, ಸುರೇಶ್‍ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಎ.ದೇವೇಗೌಡ ಸಭೆಯಲ್ಲಿ ಭಾಗವಹಿಸಿದ್ದರು.

ಜುಲೈನಲ್ಲಿ ಅಧಿವೇಶನ ನಡೆಯಲಿದೆ ಅದಕ್ಕೂ ಮೊದಲೇ ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದ ಎಂಎಲ್‍ ಎಗಳು, ಎಂಎಲ್‍ ಸಿಗಳ ಸಭೆ ಕರೆದು ಪಠ್ಯಪುಸ್ತಕ ಪರಿಷ್ಕರಣೆಗೆ ನೂತನ ಸರ್ಕಾರ ಮುಂದಾಗಿರುವ ಕುರಿತು ಚರ್ಚಿಸಲು ತೀರ್ಮಾನಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಮಾಜಿ ಸಚಿವರು ಹಾಗೂ ಎಂಎಲ್‌ಸಿಗಳು ಒಟ್ಟಿಗೆ ಸೇರಿ ಸಭೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ವಿಚಾರದಲ್ಲಿ ಸಾಧಕ – ಬಾಧಕ ಚರ್ಚೆ ಮಾಡದೇ ಪೂರ್ವಾಗ್ರಹ ಪೀಡಿತರಾಗಿ, ಅಸಹಿಷ್ಣುತೆಯಿಂದ ಪಠ್ಯ ತೆಗೆಯಬೇಕೆಂಬ ವಿಚಾರವನ್ನು ನಾವು ಸಹಿಸಲ್ಲ. ಸರ್ಕಾರಕ್ಕೆ ಸಲಹೆ ಕೊಡುತ್ತೇವೆ. ವ್ಯಕ್ತಿಗಳು ಬದಲಾಗಬಹುದು ಆದರೆ ಸರ್ಕಾರವಲ್ಲ. ಮಕ್ಕಳಿಗೆ ಯಾವುದು ಹಿತ ಮತ್ತು ಉತ್ತಮ ನಾಗರಿಕನಾಗಬಹುದು ಎನ್ನೋದು ಶಿಕ್ಷಣದಿಂದ ಸಾಧ್ಯ. ಪೂರ್ವಗ್ರಹ ಪೀಡಿತದಿಂದ ಶಿಕ್ಷಣ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ. ಇಂದು ಏನು ಮಾಡಬೇಕು ಎಂದು ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆದಿದೆ. ನಂತರ ಶಿಕ್ಷಣ ಕ್ಷೇತ್ರದಲ್ಲಿ ಇರುವವರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

RELATED ARTICLES
- Advertisment -
Google search engine

Most Popular