ಚಾಮರಾಜನಗರ: ಈ ಬಾರಿಯೂ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ಪುಟ್ಟರಂಗಶೆಟ್ಟಿ ನಗುನಗುತ್ತಲೇ ಬೇಸರ ಹೊರಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂತ್ರಿ ಆಗುವ ಕನಸು ಕಂಡಿರಲಿಲ್ಲ ಎಂದು ಹೇಳಿದರು. ಹಾಗೆಯೇ ನಾನು ಕೂಡ ಶಾಸಕ ಆಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದರೆ ೪ ಬಾರಿ ಶಾಸಕನಾದೆ. ಈ ಬಾರಿ ಮಂತ್ರಿ ಆಗುತ್ತೇನೆ ಎಂದು ಕನಸು ಕಂಡಿದ್ದೆ. ಆದರೆ ಆ ರೀತಿ ಆಗಲಿಲ್ಲ. ಇದನ್ನೇ ವಿಧಿಯಾಟ ಎನ್ನುವುದು ಎಂದು ಹೇಳಿದರು. ರಾಜಕಾರಣದಲ್ಲಿ ಒಂದು ನಿಮಿಷ, ಒಂದು ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು. ಹೀಗೆ ಆಗಬೇಕು ಎಂದು ನಮ್ಮ ಹಣೆಬರಹದಲ್ಲಿ ಮೊದಲೇ ಬರೆದಿರುತ್ತದೆ ಎಂದು ಹೇಳಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಮ್ಮ ಇಲಾಖೆ ಅಧಿಕಾರಿಗಳು ಸನ್ಮಾನ ಮಾಡುವುದಾಗಿ ಹೇಳಿದರು. ಸನ್ಮಾನ ಸ್ವೀಕರಿಸುವ ಕೆಲಸ ಆ. ೩೦ರ ನಂತರ ಮಾಡುತ್ತೇನೆ ಎಂದು ಹೇಳಿದೆ. ಇದು ಕೇವಲ ಟ್ರೇಲರ್ ಅಷ್ಟೇ. ಪಿಕ್ಚರ್ ಇನ್ನೂ ಬಾಕಿ ಇದೆ. ಅಭಿ ತೋ ಎ ಶುರುವಾತ್ ಹೇ ಎಂದು ಹೇಳಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ೧೦೦ ದಿನ ಪೂರೈಸಿದೆ. ಇನ್ನೂ ೫ ವರ್ಷ ಬಾಕಿಯಿದೆ. ಗೃಹಲಕ್ಷ್ಮಿ ಯೋಜನೆ ಬರುವುದಕ್ಕೂ, ನಮ್ಮ ತಂದೆ-ತಾಯಿ ನನಗೆ ಲಕ್ಷ್ಮಿ ಎಂದು ಹೆಸರು ಇಡುವುದಕ್ಕೂ ಸಾಮ್ಯತೆ ಇದೆ. ನಾನು ಮಂತ್ರಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಬಹಳಷ್ಟು ಹೋರಾಟ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು.
