ತುಮಕೂರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಅವರು, ಯಾರು ಚರ್ಚೆ ಮಾಡ್ತಿರೋದು ಈ ವಿಚಾರ. ಸರ್ಕಾರದಲ್ಲೇನು ಈ ಕುರಿತು ಚರ್ಚೆ ಆಗಿಲ್ಲ. ಅವರವರೇ ಚರ್ಚೆ ಮಾಡ್ಕೊಳ್ತಾ ಇದ್ದಾರೆ. ಪರ ವಿರೋಧ ಅಲ್ಲಲ್ಲೇ ಚರ್ಚೆ ಆಗ್ತಿದೆ ಎಂದರು.
ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಮೊನ್ನೆ ಸದನದಲ್ಲಿ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೆಸರಿಡಲು ಅಪ್ರೂವ್ ಮಾಡಿದ್ದೇವೆ. ಅಂತಾ ಪ್ರೊಪೋಸಲ್ ಇದ್ರೆ ನಾವು ಸದನದ ಗಮನಕ್ಕೆ ತರ್ತೀವಿ. ತಪ್ಪು ಸರಿ ಅನ್ನೋದು ಬೇರೆ ಪ್ರಶ್ನೆ. ಯಾವುದೇ ಹೆಸರಿಡಬೇಕಾದ್ರೆ ಅದು ಬಿಲ್ ನ ರೀತಿಯಲ್ಲಿ ಪಾಸ್ ಆಗಬೇಕು. ಆಗ ಅಧಿಕೃತವಾಗಿ ಇಡಬಹುದು. ಅಸೆಂಬ್ಲಿಯಲ್ಲಿ ಪಾಸ್ ಆಗ್ಬೇಕಲ್ಲ. ಅಲ್ಲಿ ಯಾರು ಬೇಕಾದ್ರು ಪರ, ವಿರೋಧ ಮಾಡಬಹುದು ಎಂದರು.
ಜಾತಿಗಣತಿಯನ್ನ ವಿರೋಧಿಸುತ್ತಿರೋದು ಒಳ್ಳೆಯ ಬೆಳವಣಿಗೆಯಲ್ಲ. ವರದಿಯಲ್ಲಿ ಏನಿದೆ ಅಂತ ಇನ್ನೂ ಯಾರಿಗೂ ಗೊತ್ತಿಲ್ಲ. ಆಗಲೇ ವಿರೋಧಿಸುವುದು ಸರಿಯಲ್ಲ. ಯಾವ ಜಾತಿಯವರು ಜಾಸ್ತಿಯಿದ್ದಾರೆ ಅಂತಾ ಇನ್ನೂ ಯಾರಿಗೂ ಗೊತ್ತಿಲ್ಲ. ಸುಮ್ಮನೆ ಅವರವರೇ ಕಲ್ಪನೆ ಮಾಡಿಕೊಂಡು ಹೇಳಿಕೆಗಳನ್ನ ಕೊಡ್ತಿದ್ದಾರೆ. ಸಮೀಕ್ಷೆ ವರದಿ ಹೊರಗೆ ಬರಲಿ. ಸಾಮಾಜಿಕವಾಗಿ, ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೆ ಆ ಡೇಟಾ ಹೊರಬಂದಾಗ ಅವರನ್ನ ಮೇಲಕ್ಕೆತ್ತುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಸಾಚಾರ್ ವರದಿ ಅನುಗುಣವಾಗಿ ಮುಸ್ಲಿಂ ಸಮುದಾಯದ ಏಳ್ಗೆಗೆ ಹಲವು ಕಾರ್ಯಕ್ರಮಗಳನ್ನ ರೂಪಿಸಲಾಯಿತು. ಅದೇ ಮಾದರಿಯಲ್ಲಿ ಈ ವರದಿಯ ಅನುಷ್ಠಾನ ಆಗುವುದು ಎಂದು ತಿಳಿಸಿದರು.
ಅಹಿಂದ ಸಮಾವೇಶ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಸಮಾವೇಶ ಮಾಡ್ತಾರೆ ಅಂತ ಕೇಳಿದ್ದೆಬಿಟ್ರೆ. ಅದರ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ನಾನು ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ. ಯಾರು ಕರೆದರು ಹೋಗ್ತಿನಿ, ಅದರಲ್ಲಿ ತಪ್ಪೇನಿಲ್ಲ ಎಂದರು.
ತುಮಕೂರು ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಸ್ಪರ್ಧೆ ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಇಡೀ ದೇಶದಲ್ಲಿ ರಿಸರ್ವ್ ಕ್ಷೇತ್ರಗಳನ್ನ ಬಿಟ್ಟು ಎಲ್ಲಿ ಬೇಕಾದರು ನಿಲ್ಲಬಹುದು. ನಾನು ಅವರನ್ನ ಅಹ್ವಾನ ಮಾಡೋದೇ ಬೇಕಾಗಿಲ್ಲ. ಅವರೇ ಬರ್ತಾರೆ ಸ್ಪರ್ಧೆ ಮಾಡೋದಿದ್ರೆ. ನಮ್ಮನ್ನ ಕೇಳಿ, ಹೇಳಿ ಬರ್ತಾರಾ ಇಲ್ಲಿ. ರಾಹುಲ್ ಗಾಂಧಿ ಬರ್ತಾರೆ ಅಂದ್ರೆ ನಾವ್ಯಾರು ಬೇಡ ಅಂತೀವಾ. ಟಿ.ಬಿ ಜಯಚಂದ್ರ ಅವರು ಡೆಲ್ಲಿ ಪ್ರತಿನಿಧಿ. ಅವರಿಗೆ ಮಾಹಿತಿ ಇರಬಹುದು. ನಮಗೆ ಯಾವತ್ತು ಸಹಮತ ಇದ್ದೆ ಇರುತ್ತೆ ಎಂದು ಹೇಳಿದರು.
ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಈಶ್ವರಪ್ಪನ ಮಾತಿಗೆ ಯಾವ ಪ್ರತಿಕ್ರಿಯೆ ಕೊಡೋಕೆ ಇಷ್ಟಪಡಲ್ಲ ನಾನು ಎಂದು ಖಡಾಖಂಡಿತವಾಗಿ ನುಡಿದರು.