ಚಿಕ್ಕಮಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ದುಪ್ಪಟ್ಟು ಹಣ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 44 ಲಕ್ಷ ರೂ. ಸೈಬರ್ ವಂಚಕರು ವಂಚಿಸಿದ ಘಟನೆ ನಡೆದಿದೆ.
2024ರ ಡಿಸೆಂಬರ್ 15ರಂದು ನಗರದ ವ್ಯಕ್ತಿಯೊಬ್ಬರಿಗೆ ಅನಾಮಧೇಯ ಮೊಬೈಲ್ ನಂಬರ್ ನಿಂದ ವ್ಯಾಟ್ಸಪ್ ಗೆ ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿ ದುಪಟ್ಟು ಲಾಭಾಂಶ ಗಳಿಸುವ ಆಸಕ್ತಿ ಇದ್ದರೆ ರಿಪ್ಲೇ ಮಾಡುವಂತೆ ಮೆಸೇಜ್ ಬಂದಿದೆ.
ಇದನ್ನು ನಂಬಿದ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಆಸಕ್ತಿ ಹೊಂದಿರುತ್ತೇನೆಂದು ಹೇಳಿ ಸೈಬರ್ ವಂಚಕರು ನೀಡಿದ ಖಾತೆಗೆ 2025 ಫೆಬ್ರವರಿ 19ರಂದು ಮತ್ತು ಮಾ. 15 ರಂದು ಒಟ್ಟು 44 ಲಕ್ಷ ರೂ. ಹಾಕಿದ್ದು, ವ್ಯಕ್ತಿಗೆ ಅಸಲು ಅಥವಾ ಲಾಭದ ಹಣವನ್ನು ನೀಡದೆ ವಂಚಿಸಿದ್ದಾರೆ. ಈ ಸಂಬಂಧ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಮುಗ್ದ ಜನರು ಬಲಿ ಪಶುವಾಗುತ್ತಿದ್ದಾರೆ. ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.